ಕನ್ನಡಪ್ರಭ ವಾರ್ತೆ ಮೈಸೂರು

ಹೆಣ್ಣು ಮಕ್ಕಳು ತಮ್ಮ ಸಾಧನೆಯಿಂದ ಪೋಷಕರಿಗೆ ಶಕ್ತಿಯಾಗಿ ನಿಲ್ಲಬೇಕು ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ. ಅನುಷಾ ತಿಳಿಸಿದರು.

ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಭವಿಷ್ಯಕ್ಕೆ ಯುವ ಪೀಳಿಗೆಯು ತಮ್ಮ ಆಸಕ್ತಿದಾಯಕ ಕ್ಷೇತ್ರವನ್ನು ಆಯ್ದುಕೊಳ್ಳುವುದು ಉತ್ತಮ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಪ್ರಪಂಚದ ಅನೇಕ ದೇಶಗಳಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ಕಾನೂನಾತ್ಮಕವಾಗಿ ತುಲನೆ ಮಾಡಿ ವಿವರಿಸಿದ ಅವರು, ಕಾಲೇಜಿನಲ್ಲಿ ಮಹಿಳೆಯರಿಗೆ ದೊರಕಿಸಿ ಕೊಟ್ಟಿಸಿರುವ ಅವಕಾಶಗಳನ್ನು ತಿಳಿಸಿದರು.

ಕಾಲೇಜಿನ ಮಹಿಳಾ ಸಮಿತಿಯ ಸದಸ್ಯೆ ಡಾ. ರಮ್ಯಶ್ರೀ ಅವರು, ಸಮಿತಿಯ ಚಟುವಟಿಕೆಗಳ ವರದಿ ಮಂಡಿಸಿದರು. ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು. ಸಹಾಯಕ ಪ್ರಧ್ಯಾಪಕಿ ಶ್ವೇತಾ ಪ್ರಾರ್ಥಿಸಿದರು. ಸದಸ್ಯೆ ಮೀರಾ ನಿರೂಪಿಸಿದರು. ಮಹಿಳಾ ಸಮಿತಿಯ ಸಂಚಾಲಕಿ ಡಾ. ಕುಮುದಿನಿ ಅಚ್ಚಿ ವಂದಿಸಿದರು.