ಸಾರಾಂಶ
ವಿದ್ಯಾರ್ಥಿಗಳು ಶಿಸ್ತು, ಸಂಯಮ, ತ್ಯಾಗ, ಪ್ರಾಮಾಣಿಕತೆಯೊಂದಿಗೆ ಕಠಿಣ ಪರಿಶ್ರಮ, ಸತತ ಪ್ರಯತ್ನ ಪಡಬೇಕು. ಅಲ್ಲದೆ ದೃಢನಿರ್ಧಾರ ಮತ್ತು ಸಮಯದ ಮಹತ್ವವನ್ನು ಅರಿತು ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧಿಸಬಹುದು.
ಧಾರವಾಡ:
2025-2026ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ವಿಭಾಗಗಳ ಉದ್ಘಾಟನೆ ಜೆಎಸ್ಎಸ್ ಬನಶಂಕರಿ ಮಹಾವಿದ್ಯಾಲಯದ ಉತ್ಸವ ಸಭಾಭವನದಲ್ಲಿ ಜರುಗಿತು.ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತಪ್ರಸಾದ ಉದ್ಘಾಟಿಸಿ, ಇಂದು ಗುಣಮಟ್ಟ ಮತ್ತು ಮೌಲ್ಯದ ದೃಷ್ಟಿಯಿಂದ ಜೆಎಸ್ಎಸ್ ಸಂಸ್ಥೆಯ ಕೀರ್ತಿಯು ನಾಡಿನಾದ್ಯಂತ ಪಸರಿಸಿದ್ದು ಹೆಮ್ಮೆ ಎನಿಸುತ್ತದೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ವಿದ್ಯಾರ್ಥಿಗಳು ಶಿಸ್ತು, ಸಂಯಮ, ತ್ಯಾಗ, ಪ್ರಾಮಾಣಿಕತೆಯೊಂದಿಗೆ ಕಠಿಣ ಪರಿಶ್ರಮ, ಸತತ ಪ್ರಯತ್ನ ಪಡಬೇಕು. ಅಲ್ಲದೆ ದೃಢನಿರ್ಧಾರ ಮತ್ತು ಸಮಯದ ಮಹತ್ವವನ್ನು ಅರಿತು ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧಿಸಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ವೆಂಕಟೇಶ ಮುತಾಲಿಕ್ ಮಾತನಾಡಿ, ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತಾ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಯಶಸ್ವಿನತ್ತ ಕೊಂಡೊಯುವಲ್ಲಿ ಪ್ರಯತ್ನಶೀಲರಾಗಬೇಕು ಎಂದು ಹೇಳಿದರು.ಜೆಎಸ್ಎಸ್ ನಿರ್ದೇಶಕ ಡಾ. ಸೂರಜ್ ಜೈನ್, ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಉಪಪ್ರಾಚಾರ್ಯರಾದ ಆವಂತಿಕಾ ರೊಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಿನ್ನಪ್ಪ ಕುಂದಗೋಳ, ಅರ್ಪಿತಾ ಪೋತದಾರ ಇದ್ದರು. ಸ್ಫೂರ್ತಿ ತೇಲಿ ವಂದಿಸಿದರು.