ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಜೂಡೋ ಆಟವು ಕೇವಲ ಕ್ರೀಡೆಯಾಗಿ ಉಳಿಯದೆ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ತೆಗ್ಗಿನ ಮಠ ಸಂಸ್ಥಾನದ ಪೀಠಾಧಿಪತಿ ಷ.ಬ್ರ. ವರಸಧ್ಯೋಜಾತ ಸ್ವಾಮೀಜಿ ತಿಳಿಸಿದರು.ಪಟ್ಟಣದ ಟಿಎಂಎಇ ಸಂಸ್ಥೆಯ ಔಷಧ ಮಹಾವಿದ್ಯಾಲಯದ ಆವರಣದಲ್ಲಿ ವಿಜಯನಗರ ಜಿಲ್ಲಾ ಜುಡೋ ಅಸೋಸಿಯೇಷನ್ ವತಿಯಿಂದ ನಡೆದ ಜೂಡೋ ತರಬೇತಿ ಶಿಬಿರ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದರು.
ಕ್ರೀಡೆಯು ಮನುಷ್ಯನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸುವ ಶಕ್ತಿಯನ್ನು ಹೊಂದಿದೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಜೂಡೋ ಕ್ರೀಡೆಗೆ ಪ್ರಾಧಾನ್ಯತೆ ಹೆಚ್ಚುತ್ತಿದ್ದು, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಯುವಕರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಿದ್ದಾರೆ ಎಂದರು.ಜೂಡೋ ಕ್ರೀಡೆಯಿಂದ ಶಿಸ್ತು, ಸಂಯಮದ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚುತ್ತದೆ. ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯನು ಒಂದಾದರೂ ಕ್ರೀಡೆಗಳಲ್ಲಿ ಆಸಕ್ತಿಯನ್ನು ಹೊಂದಿರಬೇಕು. ಕ್ರೀಡೆಗೆ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಶಕ್ತಿ ಇರುತ್ತದೆ. ಇಂತಹ ಕ್ರೀಡೆಗಳನ್ನು ಹೆಚ್ಚು ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆ. ಸರ್ಕಾರದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದರೆ ಜೂಡೋ ದೇಶದಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಒಲಿಂಪಿಕ್ ಕ್ರೀಡೆಯಲ್ಲಿ ಜೂಡೋ ಮಾನ್ಯತೆ ಪಡೆದಿದ್ದು, ಇದೊಂದು ಹೋರಾಟದ ಕಲೆಯಾಗಿದೆ ಎಂದರು.ವಿಜಯನಗರ ಜಿಲ್ಲಾ ಜುಡೋ ಅಸೋಸಿಯೇಷನ್ ಅಧ್ಯಕ್ಷ ಶಶಿಧರ್ ಪೂಜಾರ್ ಮಾತನಾಡಿ, ಕೇವಲ ಕ್ರಿಕೆಟ್ನಂತಹ ಕ್ರೀಡೆಗೆ ದೇಶದಲ್ಲಿ ಹೆಚ್ಚು ಪ್ರಧಾನ್ಯತೆ ಇದ್ದು, ದೈಹಿಕ ಮತ್ತು ಮಾನಸಿಕ ಬಲಾಢ್ಯಗೊಳ್ಳುವ ಕ್ರೀಡೆ ಬೆಳೆಸಿದರೆ ಯುವ ಜನತೆಯು ಕ್ರಿಡೆಯಲ್ಲಿ ಬೆಳೆಯಲು ಸಾಧ್ಯವಾಗುತ್ತದೆ, ಜೂಡೋ ಕ್ರೀಡೆಯ ಬಗ್ಗೆ ದೇಶದಲ್ಲಿ ವಿಶೇಷ ಕಾಳಜಿ ವಹಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ವಿಜಯನಗರ ಜಿಲ್ಲಾ ಜುಡೋ ಅಸೋಸಿಯೇಷನ್ ಕಾರ್ಯದರ್ಶಿ ವಿನಾಯಕ ಹಾಗೂ ಪದಾಧಿಕಾರಿಗಳಾದ ವಿರುಪಾಕ್ಷಪ್ಪ, ಎಸ್.ಆರ್. ಶಿವಾನಂದ, ರವಿ ಮೆಹೆತ್ರಿ, ಪೂಜಾರ್ ಚೈತ್ರ, ಸಂತೋಷ್ ಕುಮಾರ್, ಆಕಾಶ್, ಸಾವಿತ್ರಿ, ವಂದನ, ಸ್ಪೂರ್ತಿ, ರಮೇಶ್ ಬಿ.ವೈ., ಆರ್. ಮನೋಜ್, ಭರಮಪ್ಪ, ಯುವರಾಜ್, ಯಶಸ್ವಿನಿ, ಭಾಗ್ಯಶ್ರೀ, ಮಹಮ್ಮದ್ ಯಾಕೂಬ್ ಕಾನ್, ನಾಗರಾಜ್ ಗೌಡ, ಅಬ್ದುಲ್ ರೆಹಮಾನ್ ಹಾಗೂ ಇತರರಿದ್ದರು.