ಜೂ.6ರಿಂದ ದಕ್ಷಿಣ ಆಫ್ರಿಕಾದಲ್ಲಿ ಬಸವತತ್ವ ಸಮ್ಮೇಳನ

| Published : Jun 04 2024, 12:30 AM IST

ಜೂ.6ರಿಂದ ದಕ್ಷಿಣ ಆಫ್ರಿಕಾದಲ್ಲಿ ಬಸವತತ್ವ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಆಫ್ರಿಕಾದಲ್ಲಿ ಜೂ.6ರಿಂದ ಬಸವತತ್ವ ಸಮ್ಮೇಳನ ಜರುಗಲಿದ್ದು, ಭಾರತದ ವಿವಿಧ ಕಡೆಯಿಂದ ಸುಮಾರು 275 ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ

ಕನ್ನಡಪ್ರಭ ವಾರ್ತೆ ಬೀದರ್‌

ದಕ್ಷಿಣ ಆಫ್ರಿಕಾದಲ್ಲಿ ಜೂ.6ರಿಂದ ಬಸವತತ್ವ ಸಮ್ಮೇಳನ ಜರುಗಲಿದ್ದು, ಭಾರತದ ವಿವಿಧ ಕಡೆಯಿಂದ ಸುಮಾರು 275 ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ನುಡಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.6ರಂದು ಗಾಂಧಿ ಟಾಲಸ್ಟಾಯ್ ಫೋರಂ, ಪ್ರಿಟೋರಿಯಾ, ಜೋಯಿಸ್ ಬರ್ಗ್, ಜೂ.7ರಂದು ಪೀಠರ್ ಮಾರಿಜ್ ಬರ್ಗ್ ರೈಲ್ವೆ ನಿಲ್ದಾಣ, 8ರಂದು ಫೋವೆಕ್ಸ್ ಹಾಗೂ 9ರಂದು ಡರ್ಬನ್ ಹಾಗೂ ಸನ್ ಸಿಟಿ ನಗರದಲ್ಲಿ ಜ್ಯೋತಿ ಯಾತ್ರೆ ಹಾಗೂ ಬಸವ ತತ್ವ ಸಮ್ಮೇಳನ ಜರುಗಲಿದೆ ಎಂದು ಹೇಳಿದರು.

ಮಾತೆ ಮಹಾದೇವಿಯವರ ಬದುಕಿದ ಸಮಯದಲ್ಲಿ ಮುಂಬೈ, ಬೆಂಗಳೂರು ಸೇರಿ ದೇಶದ 28 ವಿವಿಧ ಕಡೆಗಳಲ್ಲಿ ಬಸವ ತತ್ವ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ನೇಪಾಳ, ಶ್ರೀಲಂಕಾ, ಭೂತಾನ ದೇಶಗಳಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಜರುಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ಜರುಗಲಿರುವ ಈ ಸಮ್ಮೇಳನ 4ನೇ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ ಎಂದರು. ವಿಶ್ವ ಶಾಂತಿಗಾಗಿ, ವಿಶ್ವ ಕಲ್ಯಾಣಕ್ಕಾಗಿ, ಸಕಲ ಜೀವಾತ್ಮರ ಲೇಸಿಗಾಗಿ ಈ ಸಮ್ಮೇಳನ ಜರುಗುತ್ತಲಿದ್ದು, ಮಹಾತ್ಮರಿಂದ ಮಹಾತ್ಮರಿಗಾಗಿ ಈ ಸಮ್ಮೇಳನ ನಡೆಯುತ್ತಿದೆ.

ಕಾಯಕತತ್ವ ಹಾಗೂ ಅಸ್ಪೃಶ್ಯ ನಿವಾರಣೆ ಉದ್ದೇಶದಿಂದ ಹಾಗೂ ಮಹಾತ್ಮ ಗಾಂಧಿ, ಮಹಾತ್ಮ ಬಸವೇಶ್ವರ ಹಾಗೂ ಮಹಾತ್ಮ ನೆಲ್ಸನ್ ಮಂಡೇಲಾರ ತತ್ವ ಪ್ರಚಾರಕ್ಕಾಗಿ ಈ ಅಂತಾರಾಷ್ಟ್ರೀಯ ಜ್ಯೋತಿ ಯಾತ್ರೆ ಜರುಗುತ್ತಿದೆ.

ಶನಿವಾರ ಪ್ರಜಾಪ್ರಭುತ್ವದ ತವರು ಬಸವಕಲ್ಯಾಣದ ಅನುಭವ ಮಂಟಪದಿಂದ ಈ ಜ್ಯೋತಿಯಾತ್ರೆ ಆರಂಭವಾಗಿದ್ದು, ಭಾನುವಾರ ಸೋಲಾಪುರ ಸಿದ್ಧರಾಮೇಶ್ವರ ದೇವಾಲಯದಲ್ಲಿ, ಸೋಮವಾರ ಪುಣೆಯಯಲ್ಲಿ ಅಭುತಪೂರ್ವ ಸ್ವಾಗತಗೈಯ್ಯುವರು. ಮಂಗಳವಾರ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಾಗುವುದೆಂದು ವಿವರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಬಸವ ಸೇವಾ ಫೌಂಡೇಶನ್ ಅಧ್ಯಕ್ಷ ನಾಗನಾಥ ಪಾಟೀಲ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ ಬಸವಕುಮಾರ ಪಾಟೀಲ, ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಸಂಗಮದ, ಪ್ರಮುಖರಾದ ಶಿವಶರಣಪ್ಪ ಪಾಟೀಲ ಹಾರೂರಗೇರಿ, ಮಲ್ಲಿಕಾರ್ಜುನ ಜೈಲರ್, ರವಿಕಾಂತ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.