ಕನ್ನಡಪ್ರಭ ವಾರ್ತೆ ಬೇತಮಂಗಲಜಸ್ಟೀಸ್ ನಾಗಮೋಹನ್‌ದಾಸ್ ಏಕಸದಸ್ಯ ಸಮಿತಿ ನೀಡಿರುವ ಅವೈಜ್ಞಾನಿಕ ವರದಿ ತಿರಸ್ಕರಿಸಿ ವಿವಿಧ ರೀತಿಯಲ್ಲಿ ಬಲಗೈ ಸಮುದಾಯಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ಬೃಹತ್ ಹೋರಾಟಕ್ಕೆ ಕೆಜಿಎಫ್ ತಾಲೂಕಿನಿಂದ ನಾನೂರು ಮಂದಿ ಕುಲ ಬಾಂಧವರು ಒಗ್ಗಟ್ಟು ಪ್ರದರ್ಶಿಸಲು ಬೇತಮಂಗಲದಲ್ಲಿ ಚಾಲನೆ ನೀಡಿದರು.ಪಟ್ಟಣದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬೃಹತ್ ಪ್ರತಿಭಟನೆ ಸಮಾವೇಶಕ್ಕೆ ಕೆಜಿಎಫ್ ತಾಲೂಕು ಬಲಗೈ ಸಮುದಾಯ ಬೇತಮಂಗಲ ದಿಂದ ಬೆಂಗಳೂರು ಫ್ರೀಡಂ ಪಾರ್ಕ್‌ನ ವರೆಗೆ ಪ್ರಯಾಣ ಬೆಳೆಸಿದರು.ಬೃಹತ್ ಪ್ರಮಾಣದ ಬಲಗೈ ಸಮುದಾಯದ ಮುಖಂಡರು ಕಾರ್ಯಕರ್ತರು ವರದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಹೊಲೆಯ ಸಮುದಾಯ ನಿಖರವಾಗಿ ಜಾತಿ ನಮೂದಿಸಿದ್ದರೂ, ನಮೂದಾಗಿಲ್ಲ ಎನ್ನುವಂತೆ ಅಸಂಬದ್ಧ ವರದಿ ನೀಡಿ ಎಬಿಸಿ ಗುಂಪುಗಳಾಗಿ ವಿಭಾಗಿಸಿರುವ ವರದಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅಂಗೀಕರಿಸದೆ ತಿರಸ್ಕರಿಸಬೇಕು. ಹೊಲೆಯ ಸಮುದಾಯಾದ ಎಲ್ಲಾ ಗುಂಪುಗಳನ್ನು ಒಟ್ಟುಗೂಡಿಸಿ ಎಬಿಸಿವಾರು ವರ್ಗೀಕರಿಸದೆ ಮತ್ತೊಮ್ಮೆ ವೈಜ್ಞಾನಿಕವಾಗಿ ನಿರ್ಧಿಷ್ಟ ವರದಿ ತಾಯಾರಿಸುವವರೆಗೆ ನ್ಯಾ. ನಾಗಮೋಹನ್‌ದಾಸ್ ವರದಿಯಂತೆ ಒಳಮೀಸಲಾತಿ ಜಾರಿ ಮಾಡಬಾರದು ಎಂದು ಒತ್ತಾಯಿಸಿದರು.

ಬಲಗೈ ಸಮುದಾಯದ ಮುಖಂಡರಾದ ತಂಬಾರಲ್ಲಿ ಎಂ.ರಾಮಪ್ಪ, ಯಲ್ಲಮ್ಮ, ಕೆಂಚಪ್ಪ, ಕೆ.ಬಿ.ದೇವರಾಜ್, ಬೂಚೇಪಲ್ಲಿ ಕೃಷ್ಣಮೂರ್ತಿ, ಶ್ರೀನಾಥ್ ನಾಸ್ತಿಕ್, ಸುಬ್ಬರಾಯಪ್ಪ ಸುಬ್ರಮಣಿ, ವೆಂಕಟೇಶಪ್ಪ, ಶಿವಮೂರ್ತಿ, ಮಂಜುನಾಥ್, ಜಯರಾಮ್, ರಾಮಚಂದ್ರ, ರಾಧಾಕೃಷ್ಣ, ಚಂದ್ರಪ್ಪ, ಚಲಪತಿ, ಆನಂದ್, ಸಂಜೀವಪ್ಪ ಇದ್ದರು.