ಕೆ.ಆರ್.ಪೇಟೆ: ವಿವಿಧ ಶಾಲಾ, ಕಾಲೇಜು, ಸಂಘ-ಸಂಸ್ಥೆಗಳಲ್ಲಿ ವಿಶ್ವ ಯೋಗ ದಿನಾಚರಣೆ

| Published : Jun 22 2025, 01:19 AM IST

ಕೆ.ಆರ್.ಪೇಟೆ: ವಿವಿಧ ಶಾಲಾ, ಕಾಲೇಜು, ಸಂಘ-ಸಂಸ್ಥೆಗಳಲ್ಲಿ ವಿಶ್ವ ಯೋಗ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆದ ಜಯನಗರ ಬಡಾವಣೆಯ ಆರ್‌ಟಿಒ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಯೋಗ ಕೇಂದ್ರದಿಂದ ಕಳೆದ 15 ದಿನಗಳಿಂದ ಉಚಿತವಾಗಿ ನಡೆಸಲ್ಪಡುತ್ತಿದ್ದ ಯೋಗ ಕಲಿಕಾ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ವಿವಿಧ ಶಾಲಾ ಕಾಲೇಜುಗಳು ಮತ್ತು ಸಂಘ ಸಂಸ್ಥೆಗಳಲ್ಲಿ ವಿಶ್ವ ಯೋಗ ದಿನ ಅಂಗವಾಗಿ ಮಕ್ಕಳು ಮತ್ತು ಸಾರ್ವಜನಿಕರು ಯೋಗ ಮಾಡಿ ಸಂಭ್ರಮಿಸಿದರು.

ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣ, ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಆವರಣ, ಕೆ.ಪಿ.ಎಸ್ ಶಾಲೆ, ನಳಂದ ಶಾಲೆ, ಕಿಕ್ಕೇರಿಯ ಕೆ.ಪಿ.ಎಸ್ ಶಾಲೆ ಸೇರಿದಂತೆ ಬಹುತೇಕ ಶಾಲಾ ಕಾಲೇಜುಗಳಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣ ಮತ್ತು ಆರ್‌ಟಿಒ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗಪಟು ಯೋಗಗುರು ಅಲ್ಲಮಪ್ರಭು ಅವರ ಮಾರ್ಗದರ್ಶನದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.

ಪಟ್ಟಣದ ಜಯನಗರ ಬಡಾವಣೆಯ ಆರ್‌ಟಿಒ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಯೋಗ ಕೇಂದ್ರದಿಂದ ಕಳೆದ 15 ದಿನಗಳಿಂದ ಉಚಿತವಾಗಿ ನಡೆಸಲ್ಪಡುತ್ತಿದ್ದ ಯೋಗ ಕಲಿಕಾ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಸಂಘದ ರಾಜ್ಯಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಯೋಗದಿಂದ ಆರೋಗ್ಯ, ಆರೋಗ್ಯವಂತ ಜೀವನಕ್ಕಾಗಿ ಪ್ರತಿದಿನವೂ ತಪ್ಪದೇ ಯೋಗ ಮಾಡಬೇಕು ಎಂದರು.

ಈ ವೇಳೆ ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣ ತಿಲಕ್, ಕೆ.ಆರ್. ನೀಲಕಂಠ, ಕೆ.ಕಾಳೇಗೌಡ, ಬಳ್ಳೇಕೆರೆ ಮಂಜುನಾಥ್, ಶಿಕ್ಷಕ ರಂಗಸ್ವಾಮಿ ಮತ್ತಿತರರು ಇದ್ದರು.

ನ್ಯಾಯಾಲಯದ ಆವರಣ:

ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸುಧೀರ್ ಯೋಗ ದಿನವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯವಂತ ಜೀವನಕ್ಕೆ ಯೋಗವು ಸಂಜೀವಿನಿಯಾಗಿದೆ. ನಿಯಮಿತ ಆಹಾರ ಸೇವಿಸಿ ಶಿಸ್ತು ಬದ್ಧ ಜೀವನ ನಡೆಸಿ , ಯೋಗಾಭ್ಯಾಸವನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಅಪರ ಸಿವಿಲ್ ನ್ಯಾಯಾಧಿಶ ದೇವರಾಜು ಮಾತನಾಡಿ, ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ನಾಣ್ಣುಡಿಯಂತೆ ಯೋಗಾಭ್ಯಾಸವನ್ನು ಪ್ರತಿದಿನವೂ ತಪ್ಪದೇ ನಿಯಮಿತವಾಗಿ ಮಾಡುವುದರಿಂದ ನಮ್ಮ ಮನಸ್ಸು ಹಗುರವಾಗಿ ಕೆಲಸ ಕಾರ್ಯಗಳನ್ನು ಮಾಡಲು ಹೊಸ ಹುಮ್ಮಸ್ಸು ಮೂಡುತ್ತದೆ ಎಂದರು.

ಈ ವೇಳೆ ಅಪರ ಸಿವಿಲ್ ನ್ಯಾಯಾಧಿಶರಾದ ಅರ್ಪಿತಾ, ಪಾರ್ವತಿ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ, ಕಾರ್ಯದರ್ಶಿ ಸಾಧುಗೋನಹಳ್ಳಿ ಮಂಜೇಗೌಡ, ಹಿರಿಯ ವಕೀಲರಾದ ಜಿ.ಆರ್.ಅನಂತ ರಾಮಯ್ಯ ಸೇರಿದಂತೆ ತಾಲೂಕಿನ ವಕೀಲರು, ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಲದ ಸಿಬ್ಬಂದಿಗಳು ವಿಶ್ವಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಯೋಗಗುರು ಅಲ್ಲಮಪ್ರಭು ಅವರನ್ನು ನ್ಯಾಯಾಧೀಶರು, ವಕೀಲರು ಸನ್ಮಾನಿಸಿ ಗೌರವಿಸಿದರು.