ಕನ್ನಡಪ್ರಭ ವಾರ್ತೆ ತುಮಕೂರು

ನಗರದ ಸಿದ್ಧಗಂಗಾ ಮಠದ ಸಿದ್ಧಲಿಂಗೇಶ್ವರ ಜಾತ್ರೆ ಪ್ರಯುಕ್ತ ಮಠದಲ್ಲಿ ನಡೆದಿರುವ ಮೂರು ದಿನಗಳ ಹೊನಲು ಬೆಳಕಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಷ್ಠಿತ ತಂಡಗಳು ಪಾಲ್ಗೊಂಡು ರೋಚಕ ಪ್ರದರ್ಶನ ನೀಡಿ ಕ್ರೀಡಾಪೇಮಿಗಳನ್ನು ಮನಸ್ಸನ್ನು ಮುದಗೊಳಿಸಿವೆ.

ಸಿದ್ಧಗಂಗಾ ಜಾತ್ರೆಯ ವಿವಿಧ ಆಚರಣೆ, ಕಾರ್ಯಕ್ರಮಗಳ ಜೊತೆಗೆ ಕಬಡ್ಡಿ ಜಾತ್ರೆಯೂ ಮಠಕ್ಕೆ ಬರುವ ಸಹಸ್ರಾರು ಭಕ್ತರನ್ನು ಆಕರ್ಷಿಸಿ ಸಂಭ್ರಮ ಹೆಚ್ಚಿಸಿದೆ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಕಾರದಲ್ಲಿ ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಈ ಪಂದ್ಯಾವಳಿ ಆಯೋಜಿಸಿದೆ. ಮೊದಲ ದಿನ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಕಬಡ್ಡಿ ಜಾತ್ರೆಗೆ ಚಾಲನೆ ನೀಡಿ ಶುಭ ಕೋರಿದರು.

20 ಪುರುಷ ಹಾಗೂ 4 ಮಹಿಳಾ ತಂಡಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಸೆಣಸಾಟ ನಡೆಸಿವೆ. ಅಂತಾರಾಷ್ಟ್ರೀಯ ಗುಣಮಟ್ಟದ ಅಂಕಣದಲ್ಲಿ ನಡೆದಿರುವ ಕಬಡ್ಡಿ ಪಂದ್ಯಾವಳಿಯನ್ನು ಪ್ರತಿದಿನ ಸಾವಿರಾರು ಕ್ರೀಡಾಭಿಮಾನಿಗಳು ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ಪಂದ್ಯಗಳ ರೋಚಕತೆಯನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರ ಅನುಕೂಲಕ್ಕಾಗಿ ವ್ಯವಸ್ಥಿತ ಗ್ಯಾಲರಿ ಸಿದ್ಧಪಡಿಸಲಾಗಿದೆ.

ಎರಡನೇ ದಿನವಾದ ಶನಿವಾರ ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್‌ನಿಂದ ಹಿರಿಯ ಕಬಡ್ಡಿ ಆಟಗಾರರಾದ ಮುನಿರಾಜು ಹಾಗೂ ನಟರಾಜು ಅವರಿಗೆ ಸಿದ್ಧಗಂಗಾ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಡಾ.ಎಸ್.ನಾಗಣ್ಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ, ಅಂದಿನ ಕಬಡ್ಡಿ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು. ಗ್ರಾಮೀಣ ಕ್ರೀಡೆಯಾದ ಕಬಡ್ಡಿ ನಮ್ಮ ಹಿರಿಮೆ. ಹಳ್ಳಿ ಹಳ್ಳಿಗಳಲ್ಲೂ ಕಬಡ್ಡಿ ಪ್ರತಿಭೆಗಳಿವೆ. ಅಂತಹವರನ್ನು ಗುರುತಿಸಿ ಬೆಳಕಿಗೆ ತರಲು ಹಾಗೂ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಇಂತಹ ಪಂದ್ಯಾವಳಿಗಳು ವೇದಿಕೆಯಾಗಲಿವೆ ಎಂದು ಹೇಳಿದರು.

ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಎಚ್.ಎನ್.ದೀಪಕ್, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಕೆ.ಆರ್.ರವೀಂದ್ರ, ಜಂಟಿ ಕಾರ್ಯದರ್ಶಿ ಮುನಿರಾಜು, ನಿರ್ದೇಶಕ ರಮೇಶ್, ಹಲವಾರು ಮಂದಿ ಹಿರಿಯ ಕಬಡ್ಡಿ ಆಟಗಾರರು, ಕನ್ನಡಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಶಂಕರ್, ವಿಜಯಸೇನೆ ರಾಜ್ಯ ಕಾರ್ಯದರ್ಶಿ ರಂಜನ್, ಚಕ್ರವರ್ತಿ ಪ್ರಕಾಶ್, ಸಿದ್ಧಗಂಗಾ ಸ್ಪೋಟ್ಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ಎಸ್.ವಿರೂಪಾಕ್ಷಯ್ಯ, ಉಪಾಧ್ಯಕ್ಷ ಕೆ.ಆರ್.ಸತೀಶ್, ಆರ್.ಗುರುಪ್ರಸಾದ್, ಆರ್.ಎಸ್.ಸೋಮಶೇಖರ್, ಬಿ.ಸಿ.ಮಲ್ಲಿಕಾರ್ಜುನ್, ಆರ್.ಎಚ್.ಶಿವಕುಮಾರ್, ಎಚ್.ಜಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ಪಿ.ಉಮಾಶಂಕರ್, ಕಾರ್ಯದರ್ಶಿ ಆರ್.ಎಂ.ಸಿದ್ಧರಾಜು, ಖಜಾಂಚಿ ಎ.ಜಿ.ಹರೀಶ್ ಹಾಗೂ ನಿರ್ದೇಶಕರು ಅಲ್ಲದೆ ವಿವಿಧ ಕ್ರೀಡಾ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.