ಕನಕಪುರ: ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ, ಸೌಹಾರ್ದತೆ ಇರಬೇಕಾದರೇ ಕೈವಾರ ತಾತಯ್ಯನವರ ತತ್ವಾದರ್ಶದ ಮೇಲೆ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಉಪ ತಹಸೀಲ್ದಾರ್ ಮನೋಹರ್ ತಿಳಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಕೈವಾರ ತಾತಯ್ಯ ಜಯಂತ್ಯುತ್ಸವದಲ್ಲಿ ತಾತಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕೈವಾರ ತಾತಯ್ಯನವರ ತತ್ವಪದ ಇಂದಿಗೂ ಪ್ರಸ್ತುತ. ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು–ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದವರು. ಅವರ ಆದರ್ಶಗಳನ್ನು ಜನರಿಗೆ ತಲುಪಿಸಲು ಇಂತಹ ಜಯಂತಿಗಳು ಸಹಕಾರಿ ಎಂದು ಹೇಳಿದರು.

ಮುಖಂಡ ಮಲ್ಲಿಕಾರ್ಜುನ್ ಮಾತನಾಡಿ, ತಾತಯ್ಯನವರಂತಹ ಮಹನೀಯರ ಬದುಕು, ತತ್ವ, ಜೀವನ ಮೌಲ್ಯವನ್ನು ಅರಿತು ಅನುಸರಿಸುವುದರಿಂದ ಮಾನವನ ಬದುಕು ಹಸನಾಗುತ್ತದೆ. ಕೈವಾರ ತಾತಯ್ಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಡೆಯ ಉಸಿರಿರುವವರೆಗೂ ಸಮಾಜದ ಏಳಿಗೆಗಾಗಿ ಶ್ರಮಿಸಿದ ಚಿಂತಕರು ದಾರ್ಶನಿಕರು. 110 ವರ್ಷಗಳ ಸಾರ್ಥಕ ಬದುಕು ನಡೆಸಿ ಸಮಾಜಕ್ಕೆ ತಮ್ಮ ಕಾಲಜ್ಞಾನದ ಮೂಲಕ ಮೌಲ್ಯಾಧಾರಿತ ಕೊಡುಗೆ ನೀಡಿದ್ದಾರೆಂದರು.

ತಾಲೂಕು ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೃಷ್ಣ ಮಾತನಾಡಿ, ತಾತಯ್ಯನವರು ಕೇವಲ ಒಂದು ಜನಾಂಗ, ಸಮುದಾಯಕ್ಕೆ ಮೀಸಲಾಗಿ ಯಾವುದೇ ಕಾರ್ಯವನ್ನು ಮಾಡದೇ ಇಡೀ ಮನುಕುಲದ ಒಳಿತಿಗಾಗಿ ಶ್ರಮಿಸಿದ ಅದಮ್ಯ ಚೇತನ. ಮುಂದಿನ ದಿನಗಳಲ್ಲಿ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತಹಸೀಲ್ದಾರರು ಆಸಕ್ತಿ ವಹಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ರಘು, ತಾಲೂಕು ಬಲಿಜ ಸಂಘದ ಗೌರವಾಧ್ಯಕ್ಷ ಡಿ.ವೆಂಕಟರಮಣಸ್ವಾಮಿ, ಅಧ್ಯಕ್ಷ ಬಾಲರಾಜು, ಖಜಾಂಚಿ ಬಂಡಿ ನಾಗರಾಜು, ಸಮುದಾಯದ ಮುಖಂಡರಾದ ರಾಮಕೃಷ್ಣ, ಚಂದ್ರು, ನವೀನ್, ಮುನಿಕೃಷ್ಣ, ಧನಂಜಯ್, ಶೇಖರ್, ಆನಂದ್, ವೆಂಕಟೇಶ್, ತಾಲೂಕು ಕಸಾಪ ಅಧ್ಯಕ್ಷ ಶಿವಲಿಂಗಯ್ಯ ಇತರರು ಉಪಸ್ಥಿತರಿದ್ದರು.


ಕೆ ಕೆ ಪಿ ಸುದ್ದಿ 02:

ಕನಕಪುರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಕೈವಾರ ತಾತಯ್ಯನವರ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.