ಕನ್ನಡಪ್ರಭ ವಾರ್ತೆ ಗೌರಿಬುದನೂರು
ಆಧ್ಯಾತ್ಮಿಕತೆ ಮೂಲಕ ಮುಕ್ತಿ ಮಾರ್ಗ ತೋರಿದ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಅವರ ಆದರ್ಶ ತತ್ವಸಿದ್ಧಾಂತಗಳು ಅನುಕರಣೀಯ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿರುವ ಡಾ. ಎಚ್.ನರಸಿಂಹಯ್ಯ ಮತ್ತು ಡಾ.ಎಂ.ಎಸ್.ರಾಮಯ್ಯ ಸೇವಾಮಂದಿರ, ಬಲಿಜ ಭವನ, ಕೈವಾರ ತಾತಯ್ಯ ದೇವಸ್ಥಾನ ಅವರಣದಲ್ಲಿ ಬಲಿಜ ಸಮಾಜ ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಯೋಗಿನಾರೇಯಣ ಯತೀಂದ್ರರ 300ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಶಿಕ್ಷಣಕ್ಕಿಂತ ದೊಡ್ಡದು ಯಾವುದೂ ಇಲ್ಲ. ಮಕ್ಕಳಿಗೆ ಶಿಕ್ಷಣ ನೀಡಿ ಅವರಿಗೆ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಸಿಕೊಡುವುದು ಬಹಳ ಮುಖ್ಯ. ಕೈವಾರ ತಾತಯ್ಯ ಅವರು ಸಮಾಜಕ್ಕೆ ನೀಡಿದ ಕೊಡುಗೆ, ಅವರು ನಡೆದು ಬಂದ ದಾರಿ ಎಲ್ಲರಿಗೂ ಮಾದರಿ. ಕೈವಾರ ತಾತಯ್ಯ ಅವರ ಆದರ್ಶದ ಹಾದಿಯಲ್ಲಿ ನಾವು ನಡೆಯಬೇಕು. ತಾತಯ್ಯ ಅವರ ಬದುಕು ಆದರ್ಶಗಳು ನಮ್ಮ ಜೀವನಕ್ಕೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು.ಶಿಕ್ಷಣ ಇಂದು ಪ್ರತಿಯೊಬ್ಬರಿಗೂ ಅವಶ್ಯ. ಶಿಕ್ಷಣ ಇಲ್ಲದಿದ್ದರೆ ಸಮಾಜವನ್ನು ಸುಧಾರಿಸುವುದು ಕಷ್ಟ. ಮಕ್ಕಳು ಟಿವಿ, ಮೊಬೆಲ್ಗಳಲ್ಲಿಯೇ ಹೆಚ್ಚಿನ ಕಾಲ ಕಳೆಯುತ್ತಾರೆ. ಇವುಗಳಿಂದ ಮಕ್ಕಳನ್ನು ಆದಷ್ಟು ದೂರವಿಡಬೇಕು. ಮಗುವಿನ ಶಿಕ್ಷಣದ ಕಡೆ ಪಾಲಕರು ಕಾಳಜಿ ವಹಿಸಬೇಕು. ಆಗಾಗ ಮಕ್ಕಳ ಶೈಕ್ಷಣಿಕ ಪ್ರಗತಿ ಅವಲೋಕನ ಮಾಡುತ್ತಿರಬೇಕು ಎಂದು ಸಲಹೆ ನೀಡಿದರು.
ಪೋಷಕರು ಮಕ್ಕಳಿಗೆ ಶಿಕ್ಷಣ ಒದಗಿಸುವಲ್ಲಿ ಹಿಂದೆ ಬೀಳಬಾರದು. ಅದರಲ್ಲೂ ಹೆಣ್ಣುಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮಹತ್ವ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಇರುವುದನ್ನು ಕಾಣುತ್ತಿದ್ದೇವೆ. ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶ್ರದ್ಧೆಯಿಂದ ವ್ಯಾಸಂಗ ಮಾಡುವ ಮೂಲಕ ಸಮಾಜಕ್ಕೆ ಸಹಾಯವಾಗದಿದ್ದರೂ ತಮ್ಮ ಕುಟುಂಬಕ್ಕೆ ನೆರವಾಗಬೇಕು ಎಂದು ಕರೆ ನೀಡಿದರು.
ಅತಿ ಶೀಘ್ರದಲ್ಲಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲಾಗುವುದು, ನಮ್ಮ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಎಲ್ಲಾ ಸಮುದಾಯದ 500 ಮಂದಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ತರಗತಿಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು ತಿಳಿಸಿದರು.30ವರ್ಷಗಳ ಹಿಂದೆ ಬಲಿಜ ಸಮುದಾಯಕ್ಕೆ ನೀವೇಶನವನ್ನು ನೀಡಿದ ದಾನಿಗಳಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಮುದಾಯ ಮುಖಂಡರು, ಗ್ರಾಮಸ್ಥರು ಮತ್ತಿತರರು ಭಾಗವಹಿಸಿದ್ದರು.