ಕನ್ನಡಪ್ರಭ ವಾರ್ತೆ ಮೈಸೂರು
ಮಹನೀಯರ ಜಯಂತಿಗಳು ಆಚರಣೆಗಷ್ಟೆ ಸೀಮಿತವಾಗದೆ, ಅವರ ಆದರ್ಶ ತತ್ವಗಳನ್ನು ನಾವು ಮೈಗೂಡಿಸಿಕೊಂಡು ಅರ್ಥಪೂರ್ಣಗೊಳಿಸಬೇಕು. ಜೀವನ ಸಾರ್ಥಕತೆಗಾಗಿ ಸಮಾಜದ ಒಳಿತಿಗೆ ಶ್ರಮಿಸುವ ಮೂಲಕ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೈವಾರ ತಾತಯ್ಯ ಒಂದೇ ಸಮುದಾಯಕ್ಕೆ ಸೀಮಿತರಲ್ಲ ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿ ಶ್ರೀ ಕೈವಾರ ತಾತಯ್ಯ ಬಣಜಿಗ (ಬಲಿಜ) ಯುವಕರ ಸಂಘವು ಮಂಗಳವಾರ ಆಯೋಜಿಸಿದ್ದ ಶ್ರೀ ಯೋಗಿ ನಾರಾಯಣ ಯತೀಂದ್ರ (ಕೈವಾರ ತಾತಯ್ಯ) ಅವರ 300ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಅವರು, ನಂತರ ಸಾರ್ವಜನಿಕರಿಗೆ ಮಜ್ಜಿಗೆ ಹಾಗೂ ಸಿಹಿ ವಿತರಿಸಿ ಮಾತನಾಡಿದರು.
ತ್ರಿಕಾಲ ಜ್ಞಾನಿಯಾಗಿದ್ದ ಕೈವಾರ ತಾತಯ್ಯ ಅವರು ಪ್ರಾಪಂಚಿಕ ಆಗುಹೋಗುಗಳನ್ನು ಅರಿತು ಮನುಕುಲದ ಒಳಿತಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ. 17ನೇ ಶತಮಾನದಲ್ಲಿ ಜೀವಿಸಿದ್ದ ಕೈವಾರ ತಾತಯ್ಯ ಅವರು ಪವಾಡ ಪುರುಷರಾಗಿದ್ದರು. ತಾತಯ್ಯ ಅವರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲ ಸಮಾಜಗಳು ಸ್ಮರಿಸಿಕೊಳ್ಳಬೇಕಿದೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ, ತಾರತಮ್ಯ, ಅಸಮಾನತೆ ಹೋಗಲಾಡಿಸಲು ತಾತಯ್ಯರು ಕೈಗೊಂಡ ಸಾಮಾಜಿಕ ಸುಧಾರಣೆ ಕಾರ್ಯ ಇಂದಿಗೂ ಮಾದರಿ ಎಂದರು.ದೇಶದ ಅಭ್ಯುದಯಕ್ಕೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳ ಸ್ಮರಣೆ ಭಾರತದ ಪರಂಪರೆ. ಸಮಾಜದ ಶ್ರೇಯೋಭಿವೃದ್ಧಿಗೆ ದುಡಿದವರು ಇತಿಹಾಸ ಸೃಷ್ಟಿಸುತ್ತಾರೆ. ಅಂತಹ ಶ್ರೇಷ್ಠ ದಾರ್ಶನಿಕರಲ್ಲಿ ತಾತಯ್ಯ ಅಗ್ರ ಗಣ್ಯರು. ಕಾಲಜ್ಞಾನ ಭವಿಷ್ಯವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಕೈವಾರ ತಾತಯ್ಯ. ಅವರು ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ಕೈವಾರ ಕ್ಷೇತ್ರ ಬಹಳ ಪವಿತ್ರವಾದದ್ದು ಹಾಗೂ ಧಾರ್ಮಿಕ ಪ್ರವಾಸಿ ತಾಣವೂ ಆಗಿದೆ ಎಂದರು.
ಮೈಲಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಮಾತನಾಡಿ, ತಾತಯ್ಯನವರು ತತ್ವಜ್ಞಾನಿ, ತ್ರಿಕಾಲಜ್ಞಾನಿ ಜೊತೆಗೆ ಯುಗಪುರುಷರು ಆಗಿದ್ದಾರೆ. ಪ್ರಚಲಿತ ಘಟಣೆಗಳ ಕುರಿತು ಶತಮಾನಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಸಮಾಜವನ್ನು ಅಧರ್ಮದಿಂದ ಸುಧರ್ಮದೆಡೆಗೆ ಹಾಗೂ ಜನರನ್ನು ತತ್ವಜ್ಞಾನದಿಂದ ದೈವಸಂಕಲ್ಪದೆಡೆಗೆ ಕೊಂಡೊಯ್ದರು. ಆದರ್ಶ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು ಎಂದು ತಿಳಿಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ, ಸಮಾಜ ಸೇವಕ ಕೆ. ರಘುರಾಂ ವಾಜಪಾಯಿ, ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಮೂಡ ಮಾಜಿ ಸದಸ್ಯ ನವೀನ್ ಕುಮಾರ್, ಮುಖಂಡರಾದ ಆನಂದ್ ಶೆಟ್ಟಿ, ಜಿ. ಶ್ರೀನಾಥ್ ಬಾಬು, ಪರಮೇಶ್ ಗೌಡ, ಗುರುರಾಜ್ ಶೆಟ್ಟಿ, ಎಸ್.ಎನ್. ರಾಜೇಶ್, ವಿನಯ್, ಉಮೇಶ್, ಕುಮಾರ್, ನೀತು, ಆರ್. ಶೇಖರ್, ರಮೇಶ್, ಗುರುಪ್ರಸಾದ್, ಪ್ರಮೋದ್ ಗೌಡ, ನಂದ, ರವಿಚಂದ್ರ, ಸಂದೇಶ್, ಧನಲಕ್ಷ್ಮಿ, ಪ್ರಿಯಾಂಕಾ, ಶಿಲ್ಪಾ ಮೊದಲಾದವರು ಇದ್ದರು.