ಚಪಾತಿಗೆ ಕೇಂದ್ರೀಯ ವಿವಿಯಲ್ಲಿ ಉತ್ತರ- ದಕ್ಷಿಣ ಮಾರಾಮಾರಿ - ವಿದ್ಯಾರ್ಥಿಗಳ ಗುಂಪಿನ ನಡುವೆ ಹೊಯ್ಯಿ-ಕೈ

| N/A | Published : Mar 09 2025, 06:39 AM IST

5-gluten-free-chapati-recipe

ಸಾರಾಂಶ

ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಕ್ಯಾಂಪಸ್‌ಲ್ಲಿ ಊಟದ ಹೊತ್ತಲ್ಲಿ ಹೆಚ್ಚಿನ ಚಪಾತಿಗಳನ್ನು ಕೆಲವರು ಕೊಂಡೊಯ್ದರೆಂಬ ಕಾರಣಕ್ಕಾಗಿ ವಿದ್ಯಾರ್ಥಿಗಳ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ಕಲಬುರಗಿ : ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಕ್ಯಾಂಪಸ್‌ಲ್ಲಿ ಊಟದ ಹೊತ್ತಲ್ಲಿ ಹೆಚ್ಚಿನ ಚಪಾತಿಗಳನ್ನು ಕೆಲವರು ಕೊಂಡೊಯ್ದರೆಂಬ ಕಾರಣಕ್ಕಾಗಿ ವಿದ್ಯಾರ್ಥಿಗಳ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. 

ಈ ವೇಳೆ, ಉತ್ತರ ಭಾರತದ ವಿದ್ಯಾರ್ಥಿಗಳು, ದಕ್ಷಿಣ ಭಾರತದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಘಟನೆ ಗುರುವಾರ ರಾತ್ರಿ ಊಟದ ಹೊತ್ತಲ್ಲಿ ಸಂಭವಿಸಿದ್ದು, ವಿವಿ ಕ್ಯಾಂಪಸ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಶುಕ್ರವಾರ ಕೂಡಾ ಕ್ಯಾಂಪಸ್‌ನಲ್ಲಿ ಬಿಗುವಿನ ಪರಿಸ್ಥಿತಿ ಮುಂದುವರಿದಿತ್ತು. ವಿದ್ಯಾರ್ಥಿ ಸಂಘಟನೆಯೊಂದರೊಡನೆ ಗುರುತಿಸಿಕೊಂಡ ಮುಖಂಡರು ಹೆಚ್ಚಿನ ಚಪಾತಿ ಕೊಂಡೊಯ್ದದ್ದನ್ನು ಇತರ ವಿದ್ಯಾರ್ಥಿಗಳು ಪ್ರಶ್ನಿಸಿ ಆಕ್ಷೇಪಿಸಿದ್ದಕ್ಕೆ ಗಲಾಟೆ ಶುರುವಾಗಿದ್ದು, ಉತ್ತರ ಮತ್ತು ದಕ್ಷಿಣ ಭಾರತದ ವಿದ್ಯಾರ್ಥಿಗಳ ಗುಂಪಿನ ನಡುವೆ ಗಲಾಟೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರೊಂದಿಗೂ ವಿದ್ಯಾರ್ಥಿಗಳ ಗುಂಪು ಮಾತಿನ ಚಕಮಕಿ ನಡೆಸಿದ್ದು, ಗುಂಪು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದರು. ಘಟನೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.