ಸಾರಾಂಶ
ಕಳಚೆಯಲ್ಲಿ ಪ್ರಧಾನ ಕಚೇರಿ ಹೊಂದಿ ಯಲ್ಲಾಪುರ ಪಟ್ಟಣದಲ್ಲಿಯೂ ಕಾರ್ಯನಿರ್ವಹಿಸಿ ಹೆಚ್ಚಿನ ವ್ಯವಹಾರ ನಡೆಸುತ್ತಿದೆ.
ಯಲ್ಲಾಪುರ: ಕಳೆದ ಆರ್ಥಿಕ ಸಾಲಿನಲ್ಲಿ ಸಂಘವು ₹೫೦.೩೯ ಲಕ್ಷ ಲಾಭ ಗಳಿಸಿದೆ. ನಮ್ಮ ಸಂಘ ಕಳಚೆಯಲ್ಲಿ ಪ್ರಧಾನ ಕಚೇರಿ ಹೊಂದಿ ಯಲ್ಲಾಪುರ ಪಟ್ಟಣದಲ್ಲಿಯೂ ಕಾರ್ಯನಿರ್ವಹಿಸಿ ಹೆಚ್ಚಿನ ವ್ಯವಹಾರ ನಡೆಸುತ್ತಿದೆ. ಅಲ್ಲದೇ ಎಪಿಎಂಸಿಯಲ್ಲಿ ಅಡಕೆ ದಲಾಲಿ ಕೂಡ ಪ್ರಾರಂಭಿಸಲಾಗಿದ್ದು ಇದು ನಮ್ಮ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಹೇಳಿದರು.
ಅವರು ಮಂಗಳವಾರ ಎಪಿಎಂಸಿ ಸಂಘದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ ವರ್ಷಕ್ಕಿಂತ ಹತ್ತು ಲಕ್ಷಕ್ಕೂ ಹೆಚ್ಚಿನ ಲಾಭ ಆಗಿದೆ. ಕಳೆದ ನಾಲ್ಕು ವರ್ಷಗಳಿಂದ ಎಪಿಎಂಸಿಯ ಶಾಖೆಯಲ್ಲಿ ಅಡಕೆ, ಕಾಳುಮೆಣಸು ವ್ಯಾಪಾರ ಪ್ರಾರಂಭಿಸಲಾಗಿದೆ. ಯಲ್ಲಾಪುರ, ಮುಂಡಗೋಡ, ಜೊಯಿಡಾ, ಅಂಕೋಲಾ ತಾಲೂಕುಗಳ ಸುಮಾರು ೨೦ಕ್ಕೂ ಹೆಚ್ಚು ಸಹಕಾರಿ ಸಂಘಗಳು ನಮ್ಮಲ್ಲಿ ವ್ಯವಹಾರ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಜೋಯಿಡಾದಲ್ಲಿ ಅಡಕೆ ವ್ಯಾಪಾರಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.ಸಂಘವು ಮೂರು ಶಾಖೆ ಹೊಂದಿದ್ದು, ೨೦೨೫ ಸದಸ್ಯರಿದ್ದಾರೆ. ಅಡಿಟ್ ವರ್ಗಿಕರಣದಲ್ಲಿ ಬ ವರ್ಗದಲ್ಲಿ ಮುಂದುವರಿದಿದೆ. ಶೇರು ಬಂಡವಾಳ ₹೨.೦೪ ಕೋಟಿ, ಕಾಯ್ದಿಟ್ಟ ನಿಧಿ ₹೧.೭೨ಕೋಟಿ, ಠೇವು ₹೬೪.೯೭ ಕೋಟಿ, ದುಡಿಯುವ ಬಂಡವಾಳ ₹೭೩.೪೧ ಕೋಟಿ, ಸಾಲ ವಸೂಲಾತಿ ಪ್ರಮಾಣ ಶೇ ೮೯.೬೭ ರಷ್ಟಾಗಿದೆ ಎಂದರು.
ಉಪಾಧ್ಯಕ್ಷ ರಾಘವೇಂದ್ರ ಕೋಣೆಮನೆ, ನಿರ್ದೇಶಕ ಶ್ರೀಕಾಂತ ಹೆಬ್ಬಾರ, ರಾಮಕೃಷ್ಣ ಹೆಗಡೆ, ಗಜಾನನ ಭಟ್ಟ, ರಾಘವೇಂದ್ರ ಸೂತ್ರೆಮನೆ, ಶ್ರೀನಾಥ ಹೆಗಡೆ, ಪ್ರೇಮಾ ಹೆಗಡೆ, ಮುಖ್ಯ ಕಾರ್ಯ ನಿರ್ವಾಹಕ ದತ್ತಾತ್ರೇಯ ಹೆಗಡೆ, ಶಾಖಾ ವ್ಯವಸ್ಥಾಪಕ ಪರಶುರಾಮ ಮರಾಠೆ, ಅನಂತ ಹೆಗಡೆ ಇತರರಿದ್ದರು.