ಕನ್ನಡಪ್ರಭ ವಾರ್ತೆ ಮೈಸೂರುದೇಶದಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡಬೇಕು ಎಂಬ ವಿಷಯ ಪ್ರಸ್ತಾಪವಾಗುತ್ತಿದ್ದು, ಇದು ಜಾರಿಯಾದರೆ ಮಹಿಳೆಯರು ಆಡಳಿತ ಚುಕ್ಕಾಣಿ ಹಿಡಿಯುವುದಾಗಿ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಹೇಳಿದರು.ನಗರದ ಕಲಾಮಂದಿರದಲ್ಲಿ ಮೈಸೂರು ಲೇಡೀಸ್‌ ಅಸೋಸಿಯೇಷನ್‌ ಬೆಳ್ಳಿಹಬ್ಬ ಅಂಗವಾಗಿ ಆಯೋಜಿಸಿದ್ದ ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿಶ್ವದಾದ್ಯಂತ ಈ ಹಿಂದೆ ಶೋಷಣೆ, ತುಳಿತಕ್ಕೆ ಒಳಗಾಗಿದ್ದ ಮಹಿಳೆಯರು ಈಗ ಬದಲಾಗುತ್ತಿದ್ದಾರೆ. ಈಗ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ ಎಂದರು.ಶಾಸಕ ಕೆ. ಹರೀಶ್‌ ಗೌಡ ಮಾತನಾಡಿ. ಅಬಲೆಯರನ್ನು ಸಬಲೆಯರನ್ನಾಗಿಸುವ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು ಕಾರ್ಯಕ್ರಮ ರೂಪಿಸಬೇಕು. ತಾಳ್ಮೆ ಹಾಗೂ ಬುದ್ಧಿವಂತಿಕೆ ಹೆಚ್ಚಾಗಿರುವುದರಿಂದ ಸ್ತ್ರೀಯರು ಉತ್ತಮವಾಗಿ ಆಡಳಿತ ನಿಭಾಯಿಸಬಲ್ಲರು. ನಮ್ಮ ಸರ್ಕಾರ ಗೃಹಲಕ್ಷ್ಮೀ ಯೋಜನೆಯಲ್ಲಿ ತಿಂಗಳಿಗೆ ನೀಡುತ್ತಿರುವ 2 ಸಾವಿರ ರೂ.ಗಳಿಂದ ಫಲಾನುವಿಗಳು ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್‌, ಎಡಿಸಿ ಆರ್‌. ಐಶ್ವರ್ಯ, ವಕೀಲೆ ಸುಮನಾ ಅವರನ್ನು ಸನ್ಮಾನಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರನ್ನು ಸನ್ಮಾನಿಸಲಾಯಿತು.ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕೆಪಿಸಿಸಿ ಸದಸ್ಯ ಎಚ್‌.ವಿ. ರಾಜೀವ್‌, ಸಂಘದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಉಪಾಧ್ಯಕ್ಷೆ ಪವಿತ್ರಾ ಮಲ್ಲಿಕಾರ್ಜುನ್‌, ಪದಾಧಿಕಾರಿಗಳಾದ ಪೂರ್ಣಿಮಾ ರಮೇಶ್‌, ಪುಷ್ಪಾ ನಾಗರಾಜ್, ವಿದ್ಯಾ ಶಿವಕುಮಾರ್‌, ಚಂದ್ರಕಲಾ ಶಿವರಾಜ್‌ ಇದ್ದರು.