ಮಂಗಳೂರು: ಕಲಾಮೃತ ಮಂಗಳೂರು ಆಯೋಜಿಸಿದ ಭಾವಸಂಗಮ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಶಾರದಾ ವಿದ್ಯಾನಿಲಯದ ದಿವಂಗತ ಪದ್ಮಾ ರಘುನಾಥ್ ಶೆಟ್ ವೇದಿಕೆಯಲ್ಲಿ ನಡೆಯಿತು.

ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್, ಸಂಗೀತ ನಿರ್ದೇಶಕ ಬಿ. ಚರಣ್ ಕುಮಾರ್ ಮಲ್ಯ, ಬಿಲ್ಡರ್ ಹಾಗೂ ಡೆವಲಪರ್ ರಘುನಾಥ ಸೋಮಯಾಜಿ, ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥೆ ತೇಜಸ್ವಿನಿ ಎ.ಸಿ., ನಮ್ಮಕುಡ್ಲದ ಹರೀಶ್ ಕರ್ಕೇರ, ಮಧುಬನ್‌ ಅಡ್ವರ್ಟೈಸ್‌ಮೆಂಟ್‌ ಆ್ಯಂಡ್‌ ಗ್ರಾಫಿಕ್ಸ್‌ ಸಂಸ್ಥೆಯ ಪ್ರಸನ್ನ ರಾವ್ ಇದ್ದರು.

ಮಾಲಿನಿ ಕೇಶವ ಪ್ರಸಾದ್ ಹಾಗೂ ರವೀಂದ್ರ ಪ್ರಭು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಸೋಲೋ ಕಿರಿಯರ ವಿಭಾಗದಲ್ಲಿ ಕಶ್ವಿ ಯು ಪ್ರಥಮ, ಪ್ರದಯ್ ಕಿರಣ್ ಶೆಣೈ ದ್ವಿತೀಯ, ಮೇಘನಾ ರಾವ್ ತೃತೀಯ, ಸೋಲೋ ಹಿರಿಯರ ವಿಭಾಗದಲ್ಲಿ ಭೂಮಿಕಾ ಹೆಗ್ಡೆ ಪ್ರಥಮ, ಕೂಳೂರು ಪ್ರಣತಿ ದ್ವಿತೀಯ, ಅನುಜ್ಞಾ ಲಕ್ಷ್ಮಿ ಪಿ. ತೃತೀಯ ಸ್ಥಾನ ಪಡೆದರು. ಸಾಮೂಹಿಕ ದೇಶಭಕ್ತಿ ಗೀತೆಯ ವಿಭಾಗದಲ್ಲಿ ಮಂಜುನಾಥ್ ಮತ್ತು ಬಳಗ(ಸ್ವರಸಾಗರ ತಂಡ)ಪ್ರಥಮ, ಶೈಲಜಾ ಮತ್ತು ಬಳಗ (ಕಾಳಿಕಾಂಬ ವಿಶ್ವಕರ್ಮ ತಂಡ) ದ್ವಿತೀಯ, ವಂದನಾ ಮತ್ತು ಬಳಗ( ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ತಂಡ) ತೃತೀಯ ಸ್ಥಾನ ಪಡೆದರು.

ಸಂಗೀತ ನಿರ್ದೇಶಕ ಬಿ.ಚರಣ್ ಕುಮಾರ್ ಮಲ್ಯ ಅವರಿಗೆ ಜೀವಮಾನ ಸಾಧನ ಕಲಾಮೃತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತೀಯ ಯೋಧರ ಪರವಾಗಿ ಯೋಧ ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು.


ಅನನ್ಯ ಪ್ರಾರ್ಥಿಸಿದರು. ಪ್ರಶಾಂತ್ ಶೆಟ್ ಸ್ವಾಗತಿಸಿದರು. ಗಣೇಶ್ ಸೋಮಯಾಜಿ ಪ್ರಸ್ತಾವನೆ ಮಾಡಿದರು. ಚೇತನ್ ಶೆಟ್ಟಿ ನಿರೂಪಿಸಿದರು. ನಮ್ಮಕುಡ್ಲದ ಲೀಲಾಕ್ಷ ಕರ್ಕೇರ, ಛಾಯಾಗ್ರಾಹಕ ಪುನಿಕ್ ಶೆಟ್ಟಿ ಸಹಕರಿಸಿದರು.

ಕಲಾಮೃತ ಮಂಗಳೂರು ಹಾಗೂ ನಮ್ಮ ಕುಡ್ಲ ಜಂಟಿಯಾಗಿ ಮಂಗಳೂರಿನ ಶಾರದ ವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ಅಡಿಷನ್‌ನಲ್ಲಿ ಕಿರಿಯರ ವಿಭಾಗದಲ್ಲಿ 70 ಹಾಗೂ ಹಿರಿಯರ ವಿಭಾಗದಲ್ಲಿ 77 ಸ್ಪರ್ಧಿಗಳು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಪದಕ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.