ಸಾರಾಂಶ
ಮಚ್ಚೇರಿ ಗ್ರಾಮದಲ್ಲಿ ನೂತನ ದೇವಸ್ಥಾನದ ಕಳಶಾರೋಹಣ ನೆರವೇರಿಸಲು ಆಗಮಿಸಿದ ಗುರುಮೂರ್ತಿ ಸ್ವಾಮೀಜಿಗಳನ್ನು ಗ್ರಾಮಸ್ಥರು ಸ್ವಾಗತಿಸಿದರು.
ಕನ್ನಡಪ್ರಭ ವಾರ್ತೆ ಕಡೂರು
ತಾಲೂಕಿನ ಮಚ್ಚೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಮೈಲಾರಲಿಂಗೇಶ್ವರ-ಗಂಗಾಮಾಳಮ್ಮ ದೇವಸ್ಥಾನದ ಕಳಶಾರೋಹಣ ಕಾರ್ಯಕ್ರಮ ನಡೆಯಿತು.ಹುಣಸಘಟ್ಟದ ಹಾಲು ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬ್ರಾಹ್ಮೀ ಮಹೂರ್ತದಲ್ಲಿ ಸೂಜಿಗಲ್ಲು ಮೈಲಾರದ ಶ್ರೀ ಮೈಲಾರಲಿಂಗ ಮತ್ತು ಶ್ರೀ ದೊಡ್ಡ ಬಿಲ್ಲು ಚೌಡೇಶ್ವರಿ ದೇವರುಗಳ ಉಪಸ್ಥಿತಿಯಲ್ಲಿ ಗೋಪುರ ಕಳಶಾರೋಹಣ ಮತ್ತು ಪ್ರಥಮ ಕುಂಬಾಭಿಷೇಕ ನೆರವೇರಿಸಿದರು.
ಇದಕ್ಕೂ ಮುನ್ನ ಸುಮಂಗಲಿಯರು ಹೊಳೆಪೂಜೆ ನಡೆಸಿ ಗಂಗೆ ಹೊತ್ತು ತಂದರು. ದೇವಸ್ಥಾನದಲ್ಲಿ ಕಳಾ ಹೋಮ ಮತ್ತಿತರ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಪುರೋಹಿತ ದೇವೀಪ್ರಸಾದ ಶರ್ಮ ಮತ್ತು ಸಂಗಡಿಗರು ನೆರವೇರಿಸಿದರು. ಗ್ರಾಮಸ್ಥರಿಂದ ದೋಣಿಸೇವೆ ನಡೆಯಿತು.ನಂತರ ಮಾತನಾಡಿದ ಸ್ವಾಮೀಜಿ, ದೇವಸ್ಥಾನಗಳು ನಮ್ಮ ಮನಸ್ಸನ್ನು ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತವೆ. ದೇವಸ್ಥಾನಗಳನ್ನು ಕಟ್ಟಿದರಷ್ಟೆ ಸಾಲದು. ಆ ಸ್ಥಳದಲ್ಲಿರುವ ಮಹತ್ವ ಮತ್ತು ಸಕಾರಾತ್ಮಕ ಶಕ್ತಿಯ ಪೂರ್ಣ ಪ್ರಯೋಜನ ಎಲ್ಲರೂ ಪಡೆಯಬೇಕು ಎಂದು ಕರೆ ನೀಡಿದರು.
ದೇವಸ್ಥಾನದ ಗೌಡರಾದ ಎಂ.ಕೆ.ಚಂದ್ರಪ್ಪ, ಸಮಿತಿ ಅಧ್ಯಕ್ಷ ಎಂ.ಎಚ್.ರವಿ, ಗ್ರಾಮ ಪಂಚಾಯಿತಿ ಸದಸ್ಯ ಚೆನ್ನಪ್ಪ, ಪೂಜಾರಿ ಬಸವರಾಜು, ಎಂ.ಟಿ.ಮಂಜುನಾಥ್, ಎಂ.ಎನ್.ಓಂಕಾರ್, ದೇವಸ್ಥಾನದ ಸಮಿತಿ ಸದಸ್ಯರು,ಗ್ರಾಮಸ್ಥರು ಇದ್ದರು.