ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮಕ್ಕಳು ಕಲಿಕೆಯ ಗುಣಮಟ್ಟ ಖಾತ್ರಿಪಡಿಲು ಎಫ್ಎಸ್ಎಲ್ ಕಲಿಕಾ ಹಬ್ಬ ಪೂರಕವಾಗಿದೆ ಎಂದು ಬನಹಟ್ಟಿ ಪಶ್ಚಿಮ ವಲಯದ ಸಿಆರ್ಪಿ ಜಗದೀಶ ಮೇತ್ರಿ ಹೇಳಿದರು.ಬನಹಟ್ಟಿಯ ಲಕ್ಷ್ಮೀ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಎಫ್ಎಸ್ ಎಲ್ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬ ಸಹಾಯಕ. ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆ ಗಟ್ಟಿಗೊಳಿಸಿ ಪರಸ್ಪರ ಹಂಚಿಕೊಂಡ ಕಲಿಕೆಯ ಅನುಭವಗಳು ಮಕ್ಕಳು ಮತ್ತು ಆ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಹನಗಂಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬಹಳಷ್ಟು ವಿಭಿನ್ನ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು, ಮಕ್ಕಳಿಗೆ ಪ್ರೇರಣೆ ನೀಡುವಂತಹ ಅಂಶಗಳು ಇಲಾಖೆಯಿಂದ ಹಮ್ಮಿಕೊಳ್ಳುತ್ತಿರುವುದು ತುಂಬಾ ಸಂತಸದ ವಿಷಯ ಎಂದರು.ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಶಾಂತ್ ಹೊಸಮನಿ, ಶಿಕ್ಷಣ ಸಂಯೋಜಕ ಬಿ.ಎಮ್ ಹಳೆಮನಿ, ಬನಹಟ್ಟಿ ತಾಲೂಕು ಶಿಕ್ಷಕರ ಸೊಸೈಟಿ ಅಧ್ಯಕ್ಷ ಲೋಕೇಶ್ ಹಂಜಗಿ ಮಾತನಾಡಿದರು.
ಈ ವೇಳೆ ಸಾಧಕರಾದ ಮದನಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಡಿ.ಬಿ. ಜಾಯಗೊಂಡ ಅವರಿಗೆ ಅಹಿಂಸಾ ಸಾಧನ ಪ್ರಶಸ್ತಿ, ಬನಹಟ್ಟಿಯ ಎಚ್.ಪಿ.ಎಸ್ ಸದಾಶಿವನಗರ ಶಿಕ್ಷಕ ಚಿರಂಜೀವಿ ರೋಡಕರ್ ಅವರಿಗೆ ಸಾವಿತ್ರಿಬಾಯಿ ಫುಲೆ ಶಿಕ್ಷಣ ಸೇವಾರತ್ನ ಪ್ರಶಸ್ತಿ, ಬನಹಟ್ಟಿ ಎಚ್.ಪಿ.ಎಸ್ ಸದಾಶಿವನಗರ ಶಿಕ್ಷಕಿ ಎಸ್. ವೈ. ಕೌಜಲಗಿ ಅವರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಾಲೂಕು ಗಣರಾಜ್ಯೋತ್ಸವ ಪಶಸ್ತಿ ಪುರಸ್ಕೃತ ಮುಖ್ಯಶಿಕ್ಷಕಿ ಎಸ್.ಬಿ.ಕಂಠಿಮಠ ಅವರನ್ನು ಸನ್ಮಾನಿಸಲಾಯಿತು.ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸಿಕಂದರ್, ಸಿಆರ್ಪಿಗಳಾದ ಸಂತೋಷ ಬಡ್ಡಿ, ದಾಕ್ಷಾಯಿಣಿ ಮಂಡಿ, ಶಿವಕುಮಾರ್ ಕೋಕಟನೂರ, ಮಹೇಶ ಸೋರಗಾಂವಿ, ಜಗದೀಶ ಕುಲಹಳ್ಳಿ, ಗಜಾನಂದ ಹತ್ತಳ್ಳಿ, ಕೆ. ಎನ್. ತೆಲಗಾಂವ, ಎಸ್.ಬಿ. ಪೂಜಾರಿ, ಗುರ್ಲಹೊಸೂರ್, ಸುಮಿತ್ರಾ ಮಾದನಮಟ್ಟಿ, ಶ್ರೀದೇವಿ ಕಲಕಂಬ ಇತರರು ಇದ್ದರು.