ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಯಲ್ಲಿ ಸೆ.17ರ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವ, ಧ್ವಜಾರೋಹಣ ಸಮಾರಂಭ ಆಯೋಜಿಸಲಾಗಿದ್ದು, ಇದರಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಸಂಸದರು, ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಯಲ್ಲಿ ಸೆ.17ರ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವ, ಧ್ವಜಾರೋಹಣ ಸಮಾರಂಭ ಆಯೋಜಿಸಲಾಗಿದ್ದು, ಇದರಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಸಂಸದರು, ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ.

ದೇಶಕ್ಕೆ ಆ.15ರಂದು ಸ್ವಾತಂತ್ರ್ಯ ಸಿಕ್ಕರೆ ಕಲಬುರಗಿ ಸೇರಿದಂತೆ ಕಲ್ಯಾಣದ 7 ಜಿಲ್ಲೆಗಳು ಹೈದ್ರಾಬಾದ್‌ ನಿಜಾಮನ ಆಡಳಿತದಲ್ಲಿಯೇ ಮುಂದುವರಿದಿದ್ದವು. 13 ತಿಂಗಳ ಹೋರಾಟ, ಪೊಲೀಸ್‌ ಕಾರ್ಯಾಚರಣೆ ನಂತರ ಈ ಭಾಗಕ್ಕೆ ಸೆ.17ರಂದು ಸ್ವಾತಂತ್ರ್ಯ ದೊರಕಿತು. ಅದರಂಗವಾಗಿ ಸೆ.17 ಅನ್ನು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ವಿಮೋಚನಾ ದಿನವನ್ನಾಗಿ ಆಚರಿಸುತ್ತವೆ. ಇದೀಗ ಈ ದಿನ ಸರ್ಕಾರವೇ ಸಮಾರಂಭ ಆಯೋಜಿಸಿ ಕಲ್ಯಾಣ ನಾಡಿನ ಪ್ರಗತಿಗೆ ಚಿಂತನ- ಮಂಥನ ನಡೆಸುವ ದಿಶೆಯಲ್ಲಿ ಕಾರ್ಯಪ್ರವೃತ್ತವಾಗಿದೆ.

ಕಲಬುರಗಿಯ ಈ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮುಖ್ಯಮಂತ್ರಿಗಳು, ಕಲ್ಯಾಣ ಕರ್ನಾಟಕ ಭಾಗದ ₹1,775.41 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಬುಧವಾರ ಸಂಜೆ‌ ವಿಶೇಷ ವಿಮಾನದ‌ ಮೂಲಕ ಕಲಬುರಗಿಗೆ ಅಗಮಿಸಿ‌ ಸಂಜೆ 7.40 ಗಂಟೆಗೆ ಸಾರ್ವಜನಿಕ ಉದ್ಯಾನವನದಲ್ಲಿ ಆಯೋಜಿಸಿದ್ದ ಸ್ಟ್ರೀಟ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ 8.30ಕ್ಕೆ ಅಪ್ಪ ಕೆರೆ ಕಾಮಗಾರಿಗಳ ಉದ್ಘಾಟನೆ ಮಾಡಿ ವೀಕ್ಷಣೆ ಮಾಡಿದರು.

ಮುಖ್ಯಮಂತ್ರಿಗಳು ಗುರುವಾರ ಬೆಳಗ್ಗೆ 8.30 ಗಂಟೆಗೆ ಎಸ್.ವಿ.ಪಿ ವೃತ್ತದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ‌ ಮಾಡಿ ನಂತರ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ‌ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

ಇದೇ‌ ವೇದಿಕೆಯಲ್ಲಿ ಕಲಬುರಗಿ ಜಿಲ್ಲೆಯ ₹1,105.63 ಕೋಟಿ ಮೊತ್ತದ 223 ಕಾಮಗಾರಿಗಳು ಸೇರಿದಂತೆ ಒಟ್ಟಾರೆ ಪ್ರದೇಶದ ಏಳು ಜಿಲ್ಲೆಗಳ ₹1,071.56 ಕೋಟಿ ವೆಚ್ಚದ 557 ಕಾಮಗಾರಿಗಳಿಗೆ ಅಡಿಗಲ್ಲು, ₹703.85 ಕೋಟಿ ವೆಚ್ಚದ 244 ಕಾಮಗಾರಿಗಳು ಸೇರಿದಂತೆ ಒಟ್ಟು ₹1,775.41 ಕೋಟಿ ವೆಚ್ಚದ 801 ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂದರು.

ಇಲ್ಲಿಂದ ಸಂಜೆ 4 ಗಂಟೆಗೆ ವಿಶೇಷ ವಿಮಾನದಲ್ಲಿ ನೇರವಾಗಿ ಮುಖ್ಯಮಂತ್ರಿಗಳು ಹಾಗೂ ಹಲವು ಸಚಿವರು ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ತೆರಳುತ್ತಾರೆ ಎಂದು ಸಚಿವ ಖರ್ಗೆ ಹೇಳಿದರು.