ಸಾರಾಂಶ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವ ಸಂತೆಕಟ್ಟೆ ಕೆಳಸೇತುವೆ ಕಾಮಗಾರಿಯನ್ನು ನೂತನ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವೀಕ್ಷಣೆ ಮಾಡಿದರು. ಈ ಸಂದರ್ಭ ವಿವರವಾದ ಮಾಹಿತಿಯನ್ನು ಪಡೆದರು.
ಕನ್ನಡಪ್ರಭ ವಾರ್ತೆ ಉಡುಪಿ
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುವ ಸಂತೆಕಟ್ಟೆ ಕೆಳಸೇತುವೆ ಕಾಮಗಾರಿಯನ್ನು ಬುಧವಾರ ಖುದ್ದು ವೀಕ್ಷಣೆ ಮಾಡಿದ ನೂತನ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾಮಗಾರಿ ಅವಧಿ 18 ತಿಂಗಳಾಗಿದ್ದು, ಇನ್ನೂ ವಿಳಂಬವಾಗುತ್ತಿರುವ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಿಳಂಭದಿಂದಾಗಿ ವಾಹನ ದಟ್ಟಣೆಯ ಸಮಸ್ಯೆಗಳು, ಸಂಚಾರದ ಗೊಂದಲಗಳು ನಿರ್ಮಾಣವಾಗುತ್ತಿದ್ದು, ಸಪ್ಟೆಂಬರ್ ಅಂತ್ಯದೊಳಗೆ ಭಾಗಶಃ ಕಾಮಗಾರಿಯನ್ನು ಮುಗಿಸಿ ವಾಹನ ಸಂಚಾರದ ಗೊಂದಲ ನಿವಾರಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಮಾತನಾಡಿದ ಕೋಟ ಅವರು ಕಟಪಾಡಿ ಜಂಕ್ಷನ್ನಲ್ಲಿ ಸರ್ವೀಸ್ ರಸ್ತೆ ನಿಮಾಣ, ಸಾಣೂರು-ಬಿಕ್ಕರ್ನಕಟ್ಟೆ ಕಾಮಗಾರಿಯ ಪ್ರಗತಿ, ಎನ್.ಎಚ್ 169 - ಎ ರಲ್ಲಿ ಮಲ್ಪೆ-ಕರಾವಳಿ ಬೈಪಾಸ್ ವರೆಗಿನ ಕಾಮಗಾರಿಯ ಸಮಸ್ಯೆಗಳು, ಇಂದ್ರಾಳಿ ಸೇತುವೆಯ ವಿಳಂಬ, ಅಂಪಲಪಾಡಿ ಮೇಲ್ಸೆತುವೆಯ ಕಾಮಗಾರಿಗಳಲ್ಲಿ ಟೆಂಡರ್ ಪ್ರಕ್ರಿಯೆ ವಿಳಂಬ, ಇವೆಲ್ಲವುದರ ಕುರಿತು ಸಮಗ್ರವಾಗಿ ಚರ್ಚೆ ಮಾಡಿದರು. ಸಭೆ ಮುಗಿಸಿ ಸಂತೆಕಟ್ಟೆ ಅಂಡರ್ ಪಾಸ್ನ ವೀಕ್ಷಣೆ ಸಂದರ್ಭದಲ್ಲಿ ವಿವರವಾದ ಮಾಹಿತಿಯನ್ನು ಪಡೆದರು.ಈ ಸಂದರ್ಭದಲ್ಲಿ ಸಂಸದರೊಂದಿಗೆ, ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಪೋಲಿಸ್ ವರಿಷ್ಠಾಧಿಕಾರಿಗಳು ಡಾ. ಅರುಣ್ ಕುಮಾರ್, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ, ಭೂ ದಾಖಲೆಗಳ ಉಪನಿರ್ದೇಶಕರು, ಯೋಜನಾ ನಿರ್ದೇಶಕರು, ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.