ಐಕಳ ಕಾಂತಾ ಬಾರೆ ಬೂದಾ ಬಾರೆ ಕಂಬಳವು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಫೆ. 7ರಂದು ಐಕಳ ಕಂಬಳ ನಡೆಯಲಿದೆ ಎಂದು ರಾಜ್ಯ ಕಂಬಳ ಸಮಿತಿ ಹಾಗೂ ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ
ಮೂಲ್ಕಿ: ಐಕಳ ಕಾಂತಾ ಬಾರೆ ಬೂದಾ ಬಾರೆ ಕಂಬಳವು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಫೆ. 7ರಂದು ಐಕಳ ಕಂಬಳ ನಡೆಯಲಿದೆ ಎಂದು ರಾಜ್ಯ ಕಂಬಳ ಸಮಿತಿ ಹಾಗೂ ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಐಕಳಬಾವ ಮಂಜೊಟ್ಟಿ ಗದ್ದೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ವೀರ ಪುರುಷರಾದ ಕಾಂತಾಬಾರೆ ಮತ್ತು ಬೂದಾಬಾರೆ ಎಂಬ ಅವಳಿ ವೀರ ಪುರುಷರು ಶತಮಾನಗಳ ಹಿಂದೆ ಸ್ವಂತ ಕಂಬಳ ಕರೆಯನ್ನು ನಿರ್ಮಿಸಿದ್ದರು, ಮಂಜೊಟ್ಟಿ ಗದ್ದೆಯಲ್ಲಿ ಅವರು ನೆಟ್ಟ ಎರಡು ಮರ ಈಗಲೂ ಇದ್ದು, ಅತ್ಯಂತ ಕಾರಣಿಕದ ಕಂಬಳವಾಗಿದೆ.ಇಲ್ಲಿ ಕಂಬಳವು ಸಂಪ್ರಾದಾಯದೊಂದಿಗೆ ಆಧುನಿಕತೆಯ ಸ್ಪರ್ಶ ನೀಡಿ ನಡೆಯುತ್ತಿದೆ. ಜೋಡು ಕರೆಯಾಗಿ 50 ವರ್ಷಗಳು ಸಂದಿದ್ದು, ಈ ಬಾರಿ ಸುವರ್ಣ ಮಹೋತ್ಸವವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಫೆ 7ಮತ್ತು 8ರಂದು ಕಂಬಳ ನಡೆಯಲಿದ್ದು, ಸುವರ್ಣ ಮಹೋತ್ಸವ ಸಂದರ್ಭದಲ್ಲಿ ನಾಗಾಲಯ, ಬ್ರಹ್ಮಸ್ಥಾನ ಸಹಿತ ಪರಿವಾರ ಶಕ್ತಿಗಳ ಶಿಲಾಮಯ ಗುಡಿಯ ಸ್ಥಾಪನೆಯೊಂದಿಗೆ ಬ್ರಹ್ಮಕಲಶೋತ್ಸವ, ದೈವಗಳ ಪುನರ್ ಪ್ರತಿಷ್ಠಾಪನೆ ನಡೆಯಲಿದೆ. ಫೆ. 6ರಂದು ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ , ಫೆ. 7ರಂದು ಬೆಳಗ್ಗೆ 8 ಗಂಟೆಗೆ ಧಾರ್ಮಿಕ ವಿಧಿ ವಿಧಾನದೊಂದಿಗೆ ಕರೆ ಮೂಹೂರ್ತ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಅಂತಾರಾಷ್ಟ್ರೀಯ ವಾಸ್ತು ತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಒರಿಸ್ಸಾ ಹೈಕೋರ್ಟ್ ನ ನ್ಯಾಯಧೀಶ ಕೃಷ್ಣ ದೀಕ್ಷಿತ್, ಮೂಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು, ಕಟೀಲು ದೇವಳದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ರೆ.ಫಾ. ಒಸ್ವಾಲ್ಡ್ ಮೊಂತೆರೋ, ಕಾಪು ಮಾರಿಯಮ್ಮ ದೇವಸ್ಥಾನದ ಧರ್ಮದರ್ಶಿ ಕೆ. ವಾಸುದೇವ ಶೆಟ್ಟಿ, ಐಕಳ ಗ್ರಾಪಂ ಅಧ್ಯಕ್ಷ ದಿವಾಕರ ಚೌಟ, ಐಕಳ ಪ್ಯಾಮಿಲಿ ವೆಲ್ಲ್ಫೇರ್ ಟ್ರಸ್ಟ್ನಅಧ್ಯಕ್ಷರಾದ ಕೆ.ಪಿ.ಕೆ. ಹೆಗ್ಡೆ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಸಹಕಾರ ರತ್ನ ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸುವರು. ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಕೇಂದ್ರ ಸಚಿವರಾದ ಎಚ್.ಡಿ. ಕುಮಾರ ಸ್ವಾಮಿ, ಸಚಿವ ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್, ಸಂತೋಷ್ ಲಾಡ್, ಎಂ.ಆರ್.ಜಿ. ಗ್ರೂಪ್ನ ಸಿಡಿಎಂ ಪ್ರಕಾಶ್ ಶೆಟ್ಟಿ, ಸಂಸದ ಕ್ಯಾಪ್ತನ್ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಮತ್ತಿತರರು ಭಾಗವಹಿಸಲಿದ್ದಾರೆ.ಈ ಸಂದರ್ಭ ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಪ್ರತಿಷ್ಠಿತ ‘ಕಂಬಳ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಂಬಳದಲ್ಲಿ ಭಾಗವಹಿಸುವ ಎಲ್ಲ ಕೋಣಗಳ ಮಾಲೀಕರನ್ನು ಗೌರವಿಸಲಾಗುವುದು ಎಂದು ತಿಳಿಸಿದರು. ಮುಂಬೈ ಸಮಿತಿ ಅಧ್ಯಕ್ಷ ಕುಶಲ ಭಂಡಾರಿ ಮಾತನಾಡಿ, ಕಂಬಳಕ್ಕೆ ಮುಂಬೈಯಿಂದ ಕೂಡ ಸಹಕಾರ ನೀಡುತ್ತಿದ್ದು, ಐಕಳೋತ್ಸವಕ್ಕಾಗಿ ಮುಂಬೈಯಿಂದ ಕೂಡ ನೂರಾರು ಮಂದಿ ಬರಲಿದ್ದಾರೆ ಎಂದರು.ಈ ಸಂದರ್ಭ ಸಮಿತಿಯ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಒಡುಹಿತ್ತು, ಪ್ರಧಾನ ಕಾರ್ಯದರ್ಶಿ ಸ್ವರಾಜ್ ಶೆಟ್ಟಿ ಮುಂಡೂರು ದೊಡ್ಡಮನೆ, ಮುರಳೀಧರ ಶೆಟ್ಟಿ ಐಕಳಬಾವ, ಲೋಕೇಶ್ ಮುಚೂರು, ಅಮರನಾಥ್, ಸುಕುಮಾರ್ ಭಂಡಾರಿ, ಸುರೇಶ್ ಕೊಂಡೆ, ಪ್ರಮೋದ್ ಕುಮಾರ್ ಐಕಳಬಾವ, ಪ್ರದೀಪ್ ಕುಮಾರ್ ರೈ, ಲವ ಶೆಟ್ಟಿ ಕಿನ್ನಿಗೋಳಿ, ಉದಯ ಶೆಟ್ಟಿ, ರವಿರಾಜ್ ಶೆಟ್ಟಿ, ಲೀಲಾಧರ ಶೆಟ್ಟಿ, ಸುಧಾಮ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಐಕಳಬಾವ, ದಯೇಶ್ ಐಕಳ, ಶ್ರೀಶ ಸರಫ್ ಐಕಳ, ಶರತ್ ಶೆಟ್ಟಿ ಸ್ಥಳಂತ ಗುತ್ತು ಮತ್ತಿತರರು ಉಪಸ್ಥಿತರಿದ್ದರು.