ದಿವಾಕರ ಹೆಗಡೆ ಕೆರೆಹೊಂಡ ಮನೋಜ್ಞ ಅಭಿನಯ

ಕನ್ನಡಪ್ರಭ ವಾರ್ತೆ ಯಲ್ಲಾಪುರ ದಕ್ಷಿಣೋತ್ತರ ಕನ್ನಡದಲ್ಲಿ ಯಕ್ಷಗಾನ ತಾಳಮದ್ದಲೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಆಕಾಶವಾಣಿ ನಿವೃತ್ತ ಅಧಿಕಾರಿ ದಿವಾಕರ ಹೆಗಡೆ ಕೆರೆಹೊಂಡ ಅವರು ತಾವೇ ರಚಿಸಿದ "ಕನಕ-ಜಾನಕಿ " ಎಂಬ ತಾಳಮದ್ದಲೆಯನ್ನು ಭಾನುವಾರ ಏಕ ವ್ಯಕ್ತಿಯಾಗಿ ಪ್ರಸ್ತುತಪಡಿಸಿದರು.

ಹಂಡ್ರಮನೆ ಗೋಪಾಲಕೃಷ್ಣ ಭಟ್ಟರ ನಿವಾಸದಲ್ಲಿ ಕಥೆಯನ್ನು ಅತ್ಯಂತ ಪ್ರಬುದ್ಧವಾಗಿ, ಮನೋಜ್ಞವಾಗಿ ರಾಮಾಯಣದ ಸೀತೆಯನ್ನು ಚಿತ್ರಿಸಿದ್ದಾರೆ. ಸೀತೆಯ ವಾಲ್ಮೀಕಿ ಆಶ್ರಮದ ದಿನಗಳು, ೧೪ ವರ್ಷದ ವನವಾಸ, ಮಾಯಾಜಿಂಕೆ, ಲಂಕೆಯ ರಾವಣನ ಕ್ರೌರ್ಯಗಳನ್ನು ಅತ್ಯಂತ ಸುಂದರವಾಗಿ, ಭಾವನಾತ್ಮಕವಾಗಿ ಎಳೆಎಳೆಯಾಗಿ ಮಂಡಿಸಿದರು. ಸೀತೆಯ ಮನಸ್ಥಿತಿ ಲಂಕೆಯಲ್ಲಿ ರಾವಣನು ನಡೆದುಕೊಂಡ ರೀತಿ-ನೀತಿ ಇವೆಲ್ಲವುಗಳನ್ನು ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನಕಜಾನಕಿ ಎಂಬ ಕಥಾನಕಕ್ಕೆ ಪರಿಪೂರ್ಣವಾದ ಮೌಲ್ಯ ನೀಡಿ, ಅತ್ಯಂತ ಪ್ರಭಾವಪೂರ್ಣವಾದ ಕಾರ್ಯಕ್ರಮವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಅಷ್ಟೇ ಸಮರ್ಥವಾಗಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಲೆವಾದಕರಾಗಿ ಹಂಡ್ರಮನೆ ನರಸಿಂಹ ಭಟ್ಟ ಮತ್ತು ರಾಘವೇಂದ್ರ ಭಟ್ಟ ಇಡೀ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದಾರೆ. ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಅಧ್ಯಕ್ಷೀಯ ಮಾತನಾಡಿ, ರಾಮಾಯಣದ ಸೀತೆಗೆ ಸಂಬಂಧಪಟ್ಟ ಆಯ್ದ ಭಾಗಗಳನ್ನು ಆರಿಸಿಕೊಂಡು ಅತ್ಯಂತ ಮನಮುಟ್ಟುವ ಮಾತುಗಾರಿಕೆ, ಕಣ್ಮುಂದೆ ಬಂದು ನಿಲ್ಲುವಂತಹ ಹೃದಯಸ್ಪರ್ಶಿ ಸನ್ನಿವೇಶಗಳನ್ನು ಸೃಷ್ಟಿಸಿದ ದಿವಾಕರ ಹೆಗಡೆ ಅಪಾರ ಜ್ಞಾನಭಂಡಾರವನ್ನು ಹೊಂದಿದ್ದಾರೆ. ಮೊನ್ನೆಯಷ್ಟೇ ಗಾಂಧೀ ಕುಟೀರದಲ್ಲಿ "ರಾಮ-ಕೃಷ್ಣ-ಶಿವ " ಎಂಬ ನಾಟಕವನ್ನು ವೀಕ್ಷಿಸಿದ್ದೆ. ಅದಕ್ಕೆ ಉತ್ತರ ರೂಪವಾಗಿ ದಿವಾಕರ ಹೆಗಡೆ ಏಕವ್ಯಕ್ತಿ ತಾಳಮದ್ದಲೆಯಲ್ಲಿ ರಾಮಾಯಣದ ಚಿಂತನೆಯನ್ನು ವಿಷದಪಡಿಸಿದರು ಎಂದರು. ಸಾಮಾಜಿಕ ಕಾರ್ಯಕರ್ತ ಜಿ.ಜಿ. ಹೆಗಡೆ ಸ್ವಾಗತಿಸಿ, ವಂದಿಸಿದರು.