ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತುಳು ಭವನದಲ್ಲಿ ಕನಕ ಜಯಂತಿ ಆಚರಿಸಲಾಯಿತು.

ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಕನಕ ಜಯಂತಿ

ಕನ್ನಡಪ್ರಭ ವಾರ್ತೆ ಮಂಗಳೂರು

ದಾಸ ಸಾಹಿತ್ಯದ ಮೂಲಕ ಜೀವನದ ಆದರ್ಶಗಳನ್ನು ಪ್ರತಿಬಿಂಬಿಸಿದ ದಾಸವರೇಣ್ಯರಲ್ಲಿ ಕನಕದಾಸರು ಅಗ್ರಗಣ್ಯರು. ಅವರ ತತ್ವಾದರ್ಶ ಸಾರ್ವಕಾಲಿಕ ಎಂದು ಜಿಲ್ಲಾಧಿಕಾಡಿ ದರ್ಶನ್‌ ಎಚ್‌.ವಿ. ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ತುಳು ಭವನದಲ್ಲಿ ನಡೆದ ಕನಕ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯ ಜನರಿಗೆ ಅರ್ಥವಾಗುವಂತಹ ಭಾಷೆಯಲ್ಲಿ ದಾಸ ಸಾಹಿತ್ಯದ ಮೂಲಕ ಸಾಮಾಜಿಕ ಚಿಂತನೆಗಳನ್ನು ಹರಿಸಿದ್ದಾರೆ. ದಾಸ ಸಾಹಿತ್ಯದ ಮೂಲಕ ಕನಕದಾಸರು ಪಸರಿಸಿದ ತತ್ವಗಳು ನುಡಿಗಳನ್ನು, ಶ್ರೇಷ್ಠ ನಡೆಗಳಾಗಿ ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಅಕ್ಕಿ- ರಾಗಿ ಕಥೆಯ ರಾಮಧ್ಯಾನ ಚರಿತೆಯು ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಕಥೆಯಾಗಿದೆ ಎಂದವರು ಹೇಳಿದರು.

ಜಿ.ಪಂ. ಸಿಇಒ ನರ್ವಡೆ ವಿನಾಯಕ್‌ ಕಾರ್ಭಾರಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್‌ ಗಟ್ಟಿಕಾಪಿಕಾಡ್‌, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್‌ ಅತಿಥಿಗಳಾಗಿದ್ದರು.

ಹಿರಿಯ ಲೇಖಕಿ ಬಿ.ಎಂ ರೋಹಿಣಿ ಅವರು ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಕರಾವಳಿ ಕುರುಬರ ಸಂಘದ ಅಧ್ಯಕ್ಷ ನಿರಂಜನ್‌, ಹಾಲುಮತ ಮಹಾಸಭಾದ ಅಧ್ಯಕ್ಷ ಬಸವರಾಜ್‌ ಎಚ್‌. ಬೆಂಗಿ, ಕರಾವಳಿ ಹಾಲುಮತ ಕುರುಬರ ಸಂಘದ ಅಧ್ಯಕ್ಷ ಚಂದ್ರಪ್ಪ ಬಿ.ಕೆ., ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಿವಾನಂದ ಯರಝೇರಿ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್‌ ಜಿ. ಸ್ವಾಗತಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.