ಸಾರಾಂಶ
ಬುಧವಾರ ಮಣ್ಣೆತ್ತಿನ ಅಮಾವಾಸ್ಯೆ ಇರುವ ಕಾರಣ ಕನಕದಾಸ ಮೂರ್ತಿಗೆ ಮಹಿಳೆಯೊಬ್ಬರು ಪೂಜೆ ಸಲ್ಲಿಸಲು ಬಂದಾಗ ಮೂರ್ತಿ ಭಗ್ನಗೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಕನಕದಾಸರ ಮೂರ್ತಿಯ ಬಲಗೈಯನ್ನು ಭಗ್ನಗೊಳಿಸಿರುವ ಕಿಡಿಗೇಡಿಗಳು ಪ್ರತಿಮೆಯಲ್ಲಿದ್ದ ತಂಬೂರಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಕಾರಟಗಿ:
ತಾಲೂಕಿನ ಬೇವಿನಾಳ ಗ್ರಾಮದಲ್ಲಿ ನಿರ್ಮಿಸಿದ್ದ ಕನಕದಾಸರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.ಬುಧವಾರ ಮಣ್ಣೆತ್ತಿನ ಅಮಾವಾಸ್ಯೆ ಇರುವ ಕಾರಣ ಕನಕದಾಸ ಮೂರ್ತಿಗೆ ಮಹಿಳೆಯೊಬ್ಬರು ಪೂಜೆ ಸಲ್ಲಿಸಲು ಬಂದಾಗ ಮೂರ್ತಿ ಭಗ್ನಗೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಕನಕದಾಸರ ಮೂರ್ತಿಯ ಬಲಗೈಯನ್ನು ಭಗ್ನಗೊಳಿಸಿರುವ ಕಿಡಿಗೇಡಿಗಳು ಪ್ರತಿಮೆಯಲ್ಲಿದ್ದ ತಂಬೂರಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಜನ ಜಂಗುಳಿ ಉಂಟಾಗಿದ್ದು, ಮೂರ್ತಿ ಭಗ್ನಗೊಂಡ ಕನಕದಾಸರ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜತೆಗೆ ಕುರುಬ ಸಮಾಜದ ಮುಖಂಡರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಕಾರಟಗಿ ಪೊಲೀಸರು, ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಪಿಡಿಒ, ಕಂದಾಯ ನಿರೀಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುರುಬ ಸಮಾಜ ಆಕ್ರೋಶ:ಕನಕದಾಸರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಕುರುಬ ಸಮಾಜ ಒತ್ತಾಯಿಸಿದೆ. ಪಿಐ ಸುಧೀರ್ ಬೆಂಕಿ, ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಕುರಿತು ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.