ಸಾರಾಂಶ
ಎಂ. ಪ್ರಹ್ಲಾದ
ಕನ್ನಡಪ್ರಭ ವಾರ್ತೆ ಕನಕಗಿರಿವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಟ್ಟಣದ ವೆಂಕಟಾಪತಿ ಬಾವಿಯ ಕಲಾಕೃತಿ ಮತ್ತೊಮ್ಮೆ ಮಿಂಚಿದೆ. 2018ರ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಕೊಪ್ಪಳ ಜಿಲ್ಲೆಯ ಸ್ತಬ್ಧ ಚಿತ್ರವಾಗಿ ಎಲ್ಲರ ಗಮನ ಸೆಳೆದಿದ್ದ ವೆಂಕಟಾಪತಿ ಬಾವಿ ಮತ್ತು ಕನಕಾಚಲಪತಿ ದೇವಾಲಯಗಳು ಈ ಬಾರಿ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
೩೦ ಅಡಿ ಎತ್ತರ, ೬೦ ಅಡಿ ಉದ್ದ, ೭೦ ಅಡಿ ಅಗಲ ವಿಸ್ತೀರ್ಣ ಹೊಂದಿರುವಂತೆ ವೆಂಕಟಾಪತಿ ಬಾವಿ ಕಲಾಕೃತಿ ನಿರ್ಮಿಸುವ ಮೂಲಕ ಮತ್ತೊಮ್ಮೆ ಕನಕಗಿರಿ ಐತಿಹ್ಯ ವೈಭವಕ್ಕೆ ಸಾಕ್ಷಿಯಾಗಿದೆ.೨೦೧೦, ೨೦೧೩ ಹಾಗೂ ೨೦೧೫ರಲ್ಲಿ ನಡೆದ ಕನಕಗಿರಿ ಉತ್ಸವ ಆಚರಣೆಯಲ್ಲಿ ವೆಂಕಟಾಪತಿ ಬಾವಿಯ ಕಲಾಕೃತಿ ನಿರ್ಮಿಸಲಾಗಿತ್ತು. ಮೈಸೂರು ದಸರಾದಲ್ಲಿ ನಾಲ್ಕು ಇಲಾಖೆಗಳು ನಿರ್ಮಿಸಿದ ನಾಲ್ಕು ಕಲಾಕೃತಿಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ವಹಿಸಿದ್ದು, ಈ ಕಲಾಕೃತಿಯಲ್ಲಿ ನಾಡಿನ ಕವಿಗಳು, ನಾಡನ್ನಾಳಿದ ರಾಜಮನೆತನಗಳ ಲಾಂಛನಗಳು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿ ಸಾಧನೆಗೈದ ಗಣ್ಯರ ಭಾವಚಿತ್ರಗಳ ಸಹಿತ ಮಾಹಿತಿ, ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತಾಗಿ ಇತಿಹಾಸವುಳ್ಳ ಮಾಹಿತಿ ಅಡಗಿದೆ.ಐತಿಹ್ಯ: ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನೆನಪಿಸುವ ಕಲಾತ್ಮಕ ಬಾವಿ ಇದಾಗಿದ್ದು, ಬ್ರಹ್ಮ, ವಿಷ್ಣು, ಮಹೇಶ್ವರ ದೇವಾಲಯಗಳು, ಚಿಕ್ಕ ಶಿಲಾ ಪಟ್ಟಿಗೆಗಳು, ಆಕರ್ಷಕ ಶಿಲಾಚಿತ್ರಗಳು, ನಾಲ್ಕು ಪ್ರವೇಶ ದ್ವಾರಗಳು, ಶೇಷಮೂರ್ತಿ, ನೃತ್ಯಗಾರ್ತಿಯರ ಶಿಲಾಚಿತ್ರ, ೧೧೧ ಸರಳ ಶಿಲಾ ಕಂಬಗಳನ್ನು ಒಳಗೊಂಡಿದೆ. ಕನಕಗಿರಿ ಪಟ್ಟಣಕ್ಕೆ ಕಳಸವಿಟ್ಟಂತಿರುವ ಈ ಬಾವಿಯು ೨೦೦ ಅಡಿ ಉದ್ದ, ೧೫೦ ಅಡಿ ಅಗಲ ಹಾಗೂ ೫೦ ಅಡಿ ಆಳವಿದೆ. ವಿಜಯನಗರ ಸಾಮಂತ ಅರಸ ೧ನೇ ಕನಕಪ್ಪ ಉಡಚನಾಯಕನು ಕ್ರಿ.ಶ. ೧೫೮೦ರ ಆಸುಪಾಸಿನಲ್ಲಿ ಈ ಬಾವಿ ನಿರ್ಮಿಸಿರುವ ಕುರಿತು ಇತಿಹಾಸವಿದೆ. ಈ ಕಲಾತ್ಮಕ ಬಾವಿಯಲ್ಲಿ ಇತ್ತೀಚೆಗೆ ಜಗನ್ನಾಥದಾಸರು, ಎದುರಾಳಿ, ಐಪಿಎಲ್ ಸೇರಿದಂತೆ ವಿವಿಧ ಹೊಸ ಸಿನಿಮಾ, ಧಾರವಾಹಿಗಳು ಚಿತ್ರೀಕರಣಗೊಂಡಿವೆ. ಶುಭ-ಸಮಾರಂಭಗಳಿಗೂ ಈ ಬಾವಿ ಹೇಳಿ ಮಾಡಿಸಿದಂತಿದೆ. ಸಿಎಂ, ಸಚಿವರು ಮೆಚ್ಚುಗೆ:
ಮೈಸೂರು ಅರಮನೆಯ ಎದುರಿಗೆ ಇರುವ ಉದ್ಯಾನದ ಬಳಿ ನಿರ್ಮಾಣಗೊಂಡಿರುವ ವೆಂಕಟಾಪತಿ ಬಾವಿ ಕಲಾಕೃತಿ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ, ಸಚಿವರಾದ ಎಚ್.ಕೆ. ಪಾಟೀಲ್, ಶಿವರಾಜ ತಂಗಡಗಿ, ಎಚ್.ಸಿ. ಮಹದೇವಪ್ಪ, ಶಾಸಕ ತನ್ವೀರ್ ಸೇಟ್, ಹಲವು ಗಣ್ಯರು ಭೇಟಿ ನೀಡಿ ವೀಕ್ಷಿಸಿದ್ದು, ಬಾವಿಯ ಕಲೆ, ವೈಜ್ಞಾನಿಕತೆ ಹಾಗೂ ಒಳಗಡೆ ನಾಡು ಕಂಡ ಕವಿಗಳು, ಸಾಹಿತಿಗಳು, ಲಾಂಛನಗಳ ಮಾಹಿತಿ ಅಳವಡಿಸಿ ಆಕರ್ಷಕವಾಗುವಂತೆ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ವೆಂಕಟಪತಿ ಬಾವಿ, ಕನಕಾಚಲ ದೇವಸ್ಥಾನ ಒಳಗೊಂಡಂತೆ ಅನೇಕ ಕಲಾತ್ಮಕ ಬಾವಿಗಳು, ಸ್ಮಾರಕಗಳು, ದೇಗುಲಗಳು ಇಲ್ಲಿವೆ. ಅಂತಹವು ಜಿಲ್ಲಾಡಳಿತ ಮತ್ತು ಸರ್ಕಾರ ಗುರುತಿಸಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಲಾಕೃತಿ ಮಾಡಿ ಇಲ್ಲಿನ ಇತಿಹಾಸವನ್ನು ಪರಿಚಯಿಸಿರುವುದು ಅಭಿನಂದನೀಯ ಎನ್ನುತ್ತಾರೆ ಇಲ್ಲಿನ ಇತಿಹಾಸ ಸಂಶೋಧಕರು. ನಾನು ಮೂರು ಬಾರಿ ಉತ್ಸವ ಆಚರಣೆ ಸಂದರ್ಭದಲ್ಲಿ ವೆಂಕಟಾಪತಿ ಬಾವಿಯ ಕಲಾಕೃತಿ ನಿರ್ಮಿಸುವ ಮೂಲಕ ಕನಕಗಿರಿಯನ್ನು ರಾಜ್ಯಕ್ಕೆ ಪರಿಚಯಿಸುವ ಕೆಲಸ ಮಾಡಿದ್ದೆ. ಇದೀಗ ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದು, ನನ್ನ ತವರು ಕ್ಷೇತ್ರದಲ್ಲಿನ ಕಲಾತ್ಮಕ ಬಾವಿಯನ್ನು ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಕಲಾಕೃತಿ ಸಿದ್ಧಪಡಿಸಿ ವಿಶ್ವಕ್ಕೆ ಪರಿಚಯಿಸಲು ಪ್ರಯತ್ನಿಸಿದ್ದೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.