ರಬಕವಿ-ಬನಹಟ್ಟಿ: ಕನ್ಹೇರಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಮೇಲಿನ ಜಿಲ್ಲಾ ನಿರ್ಬಂಧವನ್ನು ಹೈಕೋರ್ಟ್‌ ತೆರವುಗೊಳಿಸಿದ ಬಳಿಕ ರಬಕವಿ-ಬನಹಟ್ಟಿ ನಗರಗಳಿಗೆ ಪುರಪ್ರವೇಶ ಹಾಗೂ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶ ಶನಿವಾರ ಬನಹಟ್ಟಿ ಎಸ್‌ಆರ್‌ಎ ಮೈದಾನದಲ್ಲಿ ಮಧ್ಯಾಹ್ನ ೩ ಗಂಟೆಗೆ ಜರುಗಲಿದೆ. ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹತ್ವವಿರುವ ಸಮಾರಂಭದಲ್ಲಿ ನಾಡಿನ ವಿವಿಧ ೩೦೦ಕ್ಕೂ ಅಧಿಕ ಮಠಾಧೀಶರು ಒಂದೇ ವೇದಿಕೆಯಲ್ಲಿ ಸಂಗಮಗೊಳ್ಳುತ್ತಿದ್ದು, ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದೆ. ಮಧ್ಯಾಹ್ನ ೩ ಗಂಟೆಗೆ ರಬಕವಿ ಹೊಸ ಬಸ್‌ ನಿಲ್ದಾಣದಿಂದ ಹಾಗೂ ಬನಹಟ್ಟಿಯ ನೂಲಿನ ಗಿರಣಿಯಿಂದ ಪ್ರತ್ಯೇಕವಾಗಿ ಆರಂಭಗೊಳ್ಳುವ ಮೆರವಣಿಗೆಗಳು ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಆರತಿ, ಕುಂಭ ಹೊತ್ತ ಮಹಿಳೆಯರು, ಸಾಂಪ್ರದಾಯಕ ವಾದ್ಯಗಳು, ಭಕ್ತರ ಜಯಘೋಷಗಳೊಡನೆ ಸಂಚರಿಸಿ ಬನಹಟ್ಟಿ ಎಸ್‌ಆರ್‌ಎ ಮೈದಾನದಲ್ಲಿ ಒಂದಾಗಲಿವೆ. ಬಸವಾದಿ ಶರಣರ ಪರಂಪರೆ, ಧಾರ್ಮಿಕ ಚಿಂತನೆಗಳು, ಯುವ ಪೀಳಿಗೆಗೆ ಶರಣರ ಆದರ್ಶಗಳನ್ನು ಪರಿಚಯಿಸುವ ಉದ್ದೇಶ ಕಾರ್ಯಕ್ರಮದ ಮುಖ್ಯ ಆಶಯವಾಗಿದೆಯೆಂದು ಸಂಘ ಪರಿವಾರದ ಧುರೀಣ ಶಿವಾನಂದ ಗಾಯಕವಾಡ ತಿಳಿಸಿದ್ದಾರೆ.