ಸಾರಾಂಶ
ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳಲ್ಲಿ ಕನ್ನಡದ ಬ್ಲಾಕ್ಬಸ್ಟರ್ ಚಿತ್ರ ‘ಕಾಂತಾರ’ದಲ್ಲಿನ ಅಭಿನಯಕ್ಕಾಗಿ ಖ್ಯಾತ ನಟ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರು ನಿರ್ದೇಶಿಸಿ ಅಭಿನಯಿಸಿದ ‘ಕಾಂತಾರ’ ಚಿತ್ರವು ಪ್ರಾದೇಶಿಕ ವಿಭಾಗದಲ್ಲಿ ‘ಅತ್ಯುತ್ತಮ ಮನರಂಜನಾ ಚಿತ್ರ’ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
7 ಪ್ರಶಸ್ತಿಗಳು:
1. ರಿಷಬ್ ಶೆಟ್ಟಿ- ಅತ್ಯುತ್ತಮ ನಟ2. ಕಾಂತಾರ- ಅತ್ಯುತ್ತಮ ಮನರಂಜನಾ ಸಿನಿಮಾ3. ಕೆಜಿಎಫ್-2 ಅತ್ಯುತ್ತಮ ಕನ್ನಡ ಚಿತ್ರ4. ಅನ್ಬರಿವ್- ಅತ್ಯುತ್ತಮ ಸಾಹಸ ನಿರ್ದೇಶನ (ಕೆಜಿಎಫ್-2)5. ಬಸ್ತಿ ಶೆಣೈ- ನಾನ್ ಫೀಚರ್ ಚೊಚ್ಚಲ ನಿರ್ದೆಶನ (ಮಧ್ಯಂತರ)6. ಸುನೀಲ್ ಪುರಾಣಿಕ್- ಕಲೆ ಮತ್ತು ಸಂಸ್ಕೃತಿ ಪ್ರಶಸ್ತಿ (ರಂಗ ವೈಭೋಗ)
7. ಸುರೇಶ್ ಅರಸ್- ಸಂಕಲನ ಪುರಸ್ಕಾರ (ಮಧ್ಯಂತರ)--
ನವದೆಹಲಿ: ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳಲ್ಲಿ ಕನ್ನಡದ ಬ್ಲಾಕ್ಬಸ್ಟರ್ ಚಿತ್ರ ‘ಕಾಂತಾರ’ದಲ್ಲಿನ ಅಭಿನಯಕ್ಕಾಗಿ ಖ್ಯಾತ ನಟ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರು ನಿರ್ದೇಶಿಸಿ ಅಭಿನಯಿಸಿದ ‘ಕಾಂತಾರ’ ಚಿತ್ರವು ಪ್ರಾದೇಶಿಕ ವಿಭಾಗದಲ್ಲಿ ‘ಅತ್ಯುತ್ತಮ ಮನರಂಜನಾ ಚಿತ್ರ’ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.ರಿಷಬ್ ಶೆಟ್ಟಿ ಅವರಿಗೆ ಸಂದಿರುವ ಅತ್ಯುತ್ತಮ ನಟ ಪ್ರಶಸ್ತಿಯು ಕನ್ನಡ ಚಿತ್ರರಂಗಕ್ಕೆ ಈ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಲಭಿಸಿದ ನಾಲ್ಕನೇ ಪ್ರಶಸ್ತಿಯಾಗಿದೆ.
2022ನೇ ಸಾಲಿನ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಶುಕ್ರವಾರ ಪ್ರಕಟಗೊಂಡಿವೆ. ಅವುಗಳಲ್ಲಿ ಕನ್ನಡಕ್ಕೆ ಒಟ್ಟು ಏಳು ಪ್ರಶಸ್ತಿಗಳು ಲಭಿಸಿವೆ. ರಾಷ್ಟ್ರಮಟ್ಟದಲ್ಲಿ ರಿಷಬ್ಗೆ ಅತ್ಯುತ್ತಮ ನಟ ಪ್ರಶಸ್ತಿ, ಪ್ರಾದೇಶಿಕ ವಿಭಾಗದಲ್ಲಿ ‘ಕಾಂತಾರ’ಕ್ಕೆ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ, ಖ್ಯಾತ ನಟ ಯಶ್ ಅಭಿನಯದ ಕೆಜಿಎಫ್-2 ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ, ಇದೇ ಸಿನಿಮಾದಲ್ಲಿನ ಸಾಹಸ ಸಂಯೋಜನೆಗಾಗಿ ಅನ್ಬರಿವ್ ಅವರಿಗೆ ಪ್ರಶಸ್ತಿ ಲಭಿಸಿದೆ.ನಾನ್ ಫೀಚರ್ ಫಿಲಂ ವಿಭಾಗದಲ್ಲಿ ಬಸ್ತಿ ದಿನೇಶ್ ಶೆಣೈ ಅವರಿಗೆ ‘ಮಧ್ಯಂತರ’ ಚಿತ್ರಕ್ಕಾಗಿ (ಚೊಚ್ಚಲ ನಿರ್ದೇಶನ), ಸುನೀಲ್ ಪುರಾಣಿಕ್ ಅವರಿಗೆ ‘ರಂಗ ವೈಭೋಗ’ ಚಿತ್ರಕ್ಕಾಗಿ (ಕಲೆ ಮತ್ತು ಸಂಸ್ಕೃತಿ) ಹಾಗೂ ಸುರೇಶ್ ಅರಸ್ ಅವರಿಗೆ ‘ಮಧ್ಯಂತರ’ ಚಿತ್ರಕ್ಕಾಗಿ (ಸಂಕಲನ) ಪ್ರಶಸ್ತಿ ಲಭಿಸಿದೆ.