ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಕನ್ನಡ ಸಾಹಿತ್ಯ ಸಮ್ಮೇಳನಗಳು ನಿತ್ಯೋತ್ಸವವಾಗಬೇಕು. ಕನ್ನಡ ಭಾಷೆ ಜನರಿಗೆ ತಲುಪುವ ಭಾಷೆಯಾಗಬೇಕು. ಕನ್ನಡ ಸಾಹಿತ್ಯವು ಜನ ಸಾಮಾನ್ಯರ ಭಾಷೆಯಾಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚ.ಹ. ರಘುನಾಥ್ ಹೇಳಿದರು.ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ 6ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಸಾಹಿತ್ಯದ ಮೂಲಕ ಜನರ ಜೀವನ ವಿಕಾಸ ಆಗಬೇಕು ಆಗ ಸಾಹಿತ್ಯ ಮತ್ತು ಕಲೆ ಜೀವಂತವಾಗಿರುತ್ತದೆ. ಸಾಹಿತ್ಯ ಮನರಂಜನೆಗಷ್ಟೆ ಸೀಮಿತವಾಗದೆ, ಸಮಾಜದ ಪ್ರತಿಬಿಂಬವೂ, ಗತಿಬಿಂಬವೂ ಆಗಿರಬೇಕು. ಸಮಾಜದ ತಳಸ್ತರದ ಜನರ ನೋವು-ಅವಮಾನಗಳಿಗೆ ಧ್ವನಿಯಾಗಬೇಕು. ಬರಗೂರು ರಾಮಚಂದ್ರಪ್ಪ ಮತ್ತು ಸಿದ್ದಲಿಂಗಯ್ಯ ಅವರು ಶಿರಾ ಸೀಮೆ ಕನ್ನಡ ಸಾಹಿತ್ಯ ಮತ್ತು ಸಿನಿಮಾಕ್ಕೆ ಕನ್ನಡ ವಿವೇಕ ಪರಂಪರೆಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಇವರು ಶಿರಾ ತಾಲೂಕಿನ ಹೆಮ್ಮೆ ಎಂದರು.
ಸಿದ್ದಲಿಂಗಯ್ಯ ಅವರು ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯ ಸಿನಿಮಾಗಳ ಮೂಲಕ ಗ್ರಾಮಭಾರತವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಅವರ ಮತ್ತೊಂದು ಹೇಮಾವತಿ ಸಿನಿಮಾ ಪ್ರಸ್ತುತ ದಿನದ ವಿವೇಕಕ್ಕೆ ದೊಡ್ಡ ಮಾದರಿಯಾಗಿತ್ತು ಎಂದರು.ಬರದ ಕಾರಣ ನೀಡಿ ಸರ್ಕಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಕ್ಕೆ ಹಾಕಿದೆ. ನನ್ನ ಅಭಿಪ್ರಾಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಂಭ್ರಮ ಕಾಲದ ಚಟುವಟಿಕೆಗಳಾಗಬಾರದು, ವಿಚಾರವಂತಿಕೆಯುಳ್ಳ ಅರ್ಥಪೂರ್ಣ ಸಮ್ಮೇಳನಗಳಾಗಬೇಕು ಎಂದರು.
ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಕನ್ನಡ ಪರ ವಾತಾವರಣ ನಿರ್ಮಾಣ ಮಾಡುವಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳ ಪಾತ್ರ ಬಹುಮುಖ್ಯವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಶಿರಾ ತಾಲೂಕಿನಲ್ಲಿ ಹೋಬಳಿಮಟ್ಟದಿಂದಲೂ ಯಶಸ್ವಿಯಾಗಿ ಮಾಡಲಾಗುತ್ತಿದೆ. ಇದರಿಂದ ಕನ್ನಡದ ಮನೋಧರ್ಮ ಬೆಳೆಯುತ್ತಿದೆ. ಕನ್ನಡವನ್ನು ಉಳಿಸಬೇಕಾದರೆ ಮೊದಲು ಕನ್ನಡ ನಾಡಿಜ ಜನರನ್ನು ಬದುಕಿಸಬೇಕು. ಕನ್ನಡವನ್ನು ಎಲ್ಲಾ ಜಾತಿ ಧರ್ಮದವರು ಕಟ್ಟಿದ್ದಾರೆ. ಕನ್ನಡ ಭಾಷೆ ಜಾತಿವಾದ ಮಾಡುವುದಿಲ್ಲ. ಜಾತ್ಯತೀತ ಭಾಷೆ ಸೌಹಾರ್ದ ಭಾಷೆ ಕನ್ನಡ. ಎಲ್ಲರೂ ಸೇರಿ ಕಟ್ಟಿ ಬೆಳೆಸಿದ ಭಾಷೆ ಕನ್ನಡ ಎಂದಿಗೂ ಅಳಿಯುವುದಿಲ್ಲ.ಶಾಸಕ ಟಿ.ಬಿ. ಜಯಚಂದರ ಮಾತನಾಡಿ, ಶಿರಾ ತಾಲೂಕು ಆಂಧ್ರದ ಗಡಿಯಲ್ಲಿದ್ದು, ಈ ಭಾಗದಲ್ಲಿ ಕನ್ನಡ ನಾಡು ನುಡಿಗೆ ಬೆಳವಣಿಗೆಗೆ ಅವಿರತ ಶ್ರಮ ಆಡಳಿತದಿಂದ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲು ಸರ್ಕಾರ ಶ್ರಮಿಸುತ್ತಿದೆ ಎಂದರು.
ವಿದಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಕನ್ನಡ ಭಾಷೆ ಉಳಿಯಬೇಕಾದರೆ ಕರ್ನಾಟಕದಲ್ಲಿರುವ ಕನ್ನಡ ಶಾಲೆಗಳು, ಸರಕಾರಿ ಶಾಲೆಗಳು ಉಳಿಯಬೇಕು. ಸರಕಾರಗಳು ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿ, ಸಮರ್ಪಕ ಶಿಕ್ಷಕರನ್ನು ನೇಮಿಸಿದರೆ ಕನ್ನಡ ಶಾಲೆಗಳು ಉಳಿಯಲು ಸಾಧ್ಯ. ಸ್ವಾತಂತ್ರ್ಯ ಬಂದು ೭೦ ವರ್ಷ ಕಳೆದರೂ ಸರಕಾರಿ ಶಾಲೆಗಳಿಗೆ ಸರಿಯಾಗಿ ಮೂಲಭೂತ ಸೌಲಭ್ಯ ನೀಡಲಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ೧೦ ವರ್ಷಗಳಲ್ಲಿ ಸರಕಾರಿ ಶಾಲೆಗಳು, ಕನ್ನಡ ಶಾಲೆಗಳು ಇರುವುದಿಲ್ಲ ಎಂದರು.ಸಮ್ಮೇಳನಾಧ್ಯಕ್ಷರ ಮೆರಗಣಿಗೆ: ಶಿರಾದಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಚ.ಹ.ರಘುನಾಥ ಅವರನ್ನು ನಗರದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ವಿವಿಧ ತಾಳ ಮದ್ದಳೆಗಳಿಂದ ಅದ್ಧೂರಿ ಮೆರವಣಿಗೆ ಮಾಡಲಾಯಿತು.
ಸಮ್ಮೇಳನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಕೆ.ಹನುಮಂತರಾಯಪ್ಪ, ನಗರಸಭೆ ಅಧ್ಯಕ್ಷೆ ಪೂಜಾ, ತಹಶೀಲ್ದಾರ್ ದತ್ತಾತ್ರೇಯ ಗಾದ, ಸಹಾಯಕ ಕೃಷಿ ನಿರ್ದೇಶಕ ಡಾ.ಹೆಚ್.ನಾಗರಾಜು, ಪೌರಾಯುಕ್ತ ರುದ್ರೇಶ್, ತಾ.ಪಂ. ಇಓ. ಅನಂತರಾಜು, ಪಿ.ಹೆಚ್.ಮಹೇಂದ್ರಪ್ಪ, ವೈ.ನರೇಶ್ ಬಾಬು, ಕಸಾಪ ಗೌರವ ಕಾರ್ಯದರ್ಶಿ ಪರಮೇಶ್ ಗೌಡ, ಕೋಶಾಧ್ಯಕ್ಷ ಹಿಮಂತರಾಜು, ರೇಣುಕಮ್ಮ, ಹೆಂದೊರೆ ಶಿವಣ್ಣ, ಜಯರಾಮಕೃಷ್ಣ, ನರಸಿಂಹರಾಜು, ಸಕ್ರ ನಾಗರಾಜು, ಪ.ನಾ.ಹಳ್ಳಿ ಹರೀಶ್ಕುಮಾರ್, ಬ.ಹ.ಓಂಕಾರ್, ರಮೇಶ್.ಎಸ್.ಎಲ್., ಅಶ್ವಿನಿ, ಆರ್.ಸಿ.ರಾಮಚಂದ್ರಪ್ಪ, ರಶ್ಮಿಕುಮಾರ್, ಮಂಜುಳ.ಬಿ.ಕೆ. ಸೇರಿದಂತೆ ಹಲವರು ಹಾಜರಿದ್ದರು.