ಐಗೂರು: ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯೋತ್ಸವ ಅದ್ಧೂರಿ ಆಚರಣೆ

| Published : Nov 05 2024, 12:37 AM IST

ಸಾರಾಂಶ

ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನಡಾಂಬೆ ಭುವನೇಶ್ವರಿಗೆ ಪುಷ್ಪಾರ್ಚನೆಯನ್ನು ಕನ್ನಡಾಭಿಮಾನಿಗಳು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಐಗೂರು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದಿಂದ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಕನ್ನಡ ಧ್ವಜವನ್ನು ಐಗೂರು ಕಸಾಪ ಘಟಕದ ಅಧ್ಯಕ್ಷ ಸಂಗಾರು ಕೀರ್ತಿಪ್ರಸಾದ್ ಆರೋಹಣ ಮಾಡಿದ ನಂತರ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಕನ್ನಡಾಭಿಮಾನಿಗಳು ಅರ್ಪಿಸಿದರು.

ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಅಜಿತ್‌ಕುಮಾರ್ ಮಾತನಾಡಿ, ಕರ್ನಾಟಕದ ಜಲ, ನೆಲ ಸಂಸ್ಕೃತಿ ಸಂಪ್ರಾದಾಯವನ್ನು ಉಳಿಸಿ ಬೆಳೆಸಲು ಕನ್ನಡ ನೆಲದ ಪ್ರತಿಯೊಬ್ಬರ ಜವಾಬ್ಧಾರಿಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಐಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಎಸ್.ಪೂರ್ಣಕುಮಾರ್, ಸುವರ್ಣ ಮಹೋತ್ಸವದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಈ ಕಾಲಘಟ್ಟದಲ್ಲಿ ಶಾಸ್ತ್ರೀಯ ಭಾಷೆಗೆ ಸೇರ್ಪಡೆಯಾಗುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಸೋಮವಾರಪೇಟೆ ತಾಲೂಕು ಕಸಾಪ ಸದಸ್ಯ ಶಾಫಿ ಸದಿ ಮಾತನಾಡಿ, ಪ್ರಪಂಚದಲ್ಲೇ ವೈವಿಧ್ಯತೆಯಿಂದ ಕೂಡಿದ ಭಾಷೆ ಸಂಸ್ಕೃತಿ ಕನ್ನಡದಾಗಿದೆ. ಹೃದಯ ವಿಶಾಲತೆ ಹೊಂದಿದ ಕನ್ನಡಿಗರು ದೇಶದ ಅವಿಭಾಜ್ಯ ಅಂಗವಾಗಿದ್ದಾರೆ ಎಂದರು.

ಕಾಜೂರು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ಭಾಷೆಯ ನೃತ್ಯ, ಭಾಷಣ, ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಸೋಮವಾರಪೇಟೆ ಕಸಾಪ ಹೋಬಳಿ ಘಟಕದ ಐಗೂರು ಕೇಂದ್ರದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

ಐಗೂರು ಹೋಬಳಿ ಕಸಾಪ ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ರಾಜ್ ಅರಸು, ಕೋಶಾಧಿಕಾರಿ ಬೆಳ್ಯಪ್ಪ, ಮಾಚ್ಚಂಡ ಆಶೋಕ, ಹೇಮಂತ್, ಸೋಮವಾರಪೇಟೆ ತಾಲೂಕು ಕಸಾಪ ಖಜಾಂಜಿ ಕೆ.ಪಿ.ದಿನೇಶ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ, ಗೌರವ ಕಾರ್ಯದರ್ಶಿ ಕಾಜೂರು ಶಾಲೆ ಮುಖ್ಯೋಪಾದ್ಯಾಯನಿ ಸರಳಾಕುಮಾರಿ ಇದ್ದರು.

ಶಿಕ್ಷಕಿ ಅನೂಸೂಯ ನಿರೂಪಿಸಿದರು. ಸರಳಕುಮಾರಿ ವಂದಿಸಿದರು.