ಸುದ್ದಿಗಳೊಂದಿಗೆ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವಲ್ಲಿ ಕನ್ನಡಪ್ರಭ ಮುಂಚೂಣಿಯಲ್ಲಿದೆ: ರವಿ ಹೆಗಡೆ

| Published : Jun 27 2025, 12:49 AM IST

ಸುದ್ದಿಗಳೊಂದಿಗೆ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವಲ್ಲಿ ಕನ್ನಡಪ್ರಭ ಮುಂಚೂಣಿಯಲ್ಲಿದೆ: ರವಿ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ಸುದ್ದಿಗಳನ್ನು ಕೊಡುವುದರೊಟ್ಟಿಗೆ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವಲ್ಲಿ ಕನ್ನಡಪ್ರಭ ಮುಂಚೂಣಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜನರಿಗೆ ಸುದ್ದಿಗಳನ್ನು ಕೊಡುವುದರೊಟ್ಟಿಗೆ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವಲ್ಲಿ ಕನ್ನಡಪ್ರಭ ಮುಂಚೂಣಿಯಲ್ಲಿದೆ ಎಂದು ಕನ್ನಡಪ್ರಭ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.

ನಗರದ ರಾಘವ ಕಲಾ ಮಂದಿರದಲ್ಲಿ ಕನ್ನಡಪ್ರಭ ಹೊರತಂದ ಅಖಂಡ ಬಳ್ಳಾರಿ ವಿಶೇಷ ಸಂಚಿಕೆ ಲೋಕಾರ್ಪಣೆ ಸಂಭ್ರಮ 2025 ಕಾರ್ಯಕ್ರಮದಲ್ಲಿ ಸಂಚಿಕೆ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಕುಳಿತವರಿಗೆ ಬಳ್ಳಾರಿ ಎಂದರೆ ಬಿಸಿಲ ನಾಡು ಮತ್ತು ರಿಪಬ್ಲಿಕ್ ಆಫ್ ಬಳ್ಳಾರಿ ಎನ್ನುವ ಭಾವನೆ ಇದೆ. ಆದರೆ, ಕನ್ನಡಪ್ರಭ ಸ್ಥಳೀಯವಾಗಿ ಇರುವ ಹತ್ತಾರು ವಿಶೇಷತೆಗಳನ್ನು ಪುಸ್ತಕ ರೂಪದಲ್ಲಿ ನೀಡುವ ಮೂಲಕ ಬಳ್ಳಾರಿ ಜಿಲ್ಲೆಯನ್ನು ರಾಜ್ಯಕ್ಕೆ ಬೇರೆ ರೂಪದಲ್ಲಿ ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ.

ನಮ್ಮ ಊರು ನಮ್ಮ ಜಿಲ್ಲೆ ಎನ್ನುವ ಶೀರ್ಷಿಕೆ ಹೆಸರಿನಲ್ಲಿ‌ ಪ್ರಾರಂಭವಾಗಿರುವ ಈ ಅಭಿಯಾನಕ್ಕೆ ಬಳ್ಳಾರಿ ಜಿಲ್ಲೆಯ ಜನತೆ ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ. ಸಾಮಾಜಿಕ ಕಳಕಳಿಯ ವರದಿಗಳ ಜತೆಗೆ ನೆಲದ ಸಂಸ್ಕೃತಿ ಪರಿಚಯಿಸುವ ಕೆಲಸವನ್ನು ನಿರಂತರವಾಗಿ ಮಾಡಿದ್ದೇವೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ನಮ್ಮ‌ ಗ್ರಾಮೀಣ ಸಂಸ್ಕೃತಿ ಉಳಿಸಿ ಬೆಳೆಸುವ ಸಾಹಿತ್ಯವನ್ನು ಒಳಗೊಂಡ ಪುಸ್ತಕಗಳನ್ನು ಕನ್ನಡಪ್ರಭ ನಿರಂತರವಾಗಿ ಪ್ರಕಟಿಸುತ್ತಾ ಬಂದಿದ್ದು ಅದನ್ನು ಮುಂದುವರಿಸಿಕೊಂಡು ಹೋಗಲಿದೆ.

ಕನ್ನಡ ಪತ್ರಿಕೋದ್ಯಮದಲ್ಲಿ ಬಳ್ಳಾರಿ ಜಿಲ್ಲೆಗೆ ವಿಶೇಷ ಸ್ಥಾನ ಮಾನವಿದೆ ಎಂದ ಅವರು ಬಳ್ಳಾರಿ ಜನರ ಪ್ರೀತಿ, ವಿಶ್ವಾಸವನ್ನು ಸ್ಮರಿಸಿದರು.ಬಳ್ಳಾರಿ ಎಲ್ಲದಕ್ಕೂ ಸ್ಪೂರ್ತಿಯ ಸೆಲೆ: ಪ್ರಭು ಶ್ರೀಗಳು

ಕನ್ನಡ ನಾಡು, ನುಡಿ, ಭಾಷೆ, ಗಡಿ ವಿಚಾರದಲ್ಲಿ ಬಳ್ಳಾರಿ ಜಿಲ್ಲೆ ಎಲ್ಲದಕ್ಕೂ ಸ್ಪೂರ್ತಿಯ ಸೆಲೆಯಾಗಿದೆ ಎಂದು ಸಂಡೂರು ವಿರಕ್ತಮಠದ ಪ್ರಭು ಸ್ವಾಮಿಗಳು ಹೇಳಿದರು.

ಗುರುವಾರ ಬಳ್ಳಾರಿ ನಗರದ ರಾಘವ ರಂಗ ಮಂದಿರದಲ್ಲಿ ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ಅಖಂಡ ಬಳ್ಳಾರಿ ವಿಶೇಷ ಸಂಚಿಕೆಯ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.12ನೇ ಶತಮಾನದಲ್ಲಿ ಆದ್ಯ ವಚನಕಾರರ ವಚನಗಳು ಮೊದಲು ಮುದ್ರಣ ಕಂಡಿದ್ದು ಬಳ್ಳಾರಿಯಲ್ಲಿ, ಭಾಷಾವಾರು ಪ್ರಾಂತ್ಯದ ವಿಚಾರದಲ್ಲಿ ಬಳ್ಳಾರಿ ಒಂದು ಹೆಜ್ಜೆ ಇತ್ತು ಕರ್ನಾಟಕ ಏಕೀಕರಣದ ಕಿಚ್ಚು ಹಚ್ಚಿದ್ದು ಬಳ್ಳಾರಿಯಲ್ಲಿ. ಇದರ ಮೊದಲ ಹೋರಾಟ ಆರಂಭಗೊಂಡಿದ್ದು ಇಲ್ಲಿಂದ ಇದು ರಾಜ್ಯಕ್ಕೆ ಸ್ಫೂರ್ತಿಯಾಗಿದೆ. ರಾಜ್ಯದ ಗಡಿ ವಿಚಾರದಲ್ಲಿ ಸಾಕಷ್ಟು ಗದ್ದಲ ಗಲಾಟೆಗಳಾಗುತ್ತಿವೆ. ಆದರೆ ಬಳ್ಳಾರಿಯಲ್ಲಿ ಕನ್ನಡ, ತೆಲಗು ಭಾಷೆಯನ್ನು ಸಮಾನವಾಗಿ ಕಾಣುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದರು.ದಲಿತರು ದೇವಸ್ಥಾನ ಪ್ರವೇಶಿಸಬೇಕೆಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ ಪ್ರವೇಶ ಮಾಡಿ ಈಡೇರಿಸಲಾಗಿತ್ತು. ಬಳ್ಳಾರಿಯಲ್ಲಿ ಕನ್ನಡ ಭಾಷೆ ಉಳಿಯಲು ಆಂಗ್ಲರು ಹೆಚ್ಚು ಶ್ರಮಿಸಿದ್ದಾರೆ. ಮೊದಲ ಜಿಲ್ಲಾಧಿಕಾರಿಯಾಗಿದ್ದ ಥಾಮಸ್ ಮನ್ರೋ ಬಳ್ಳಾರಿಗೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ರಾಜ್ಯದ ಇತರೆ ಕಡೆಗಳಲ್ಲಿ ಬ್ರಿಟಿಷ್ ಅಧಿಕಾರಿಯು ಕನ್ನಡ ಭಾಷೆಯ ಶಾಲೆಗಳನ್ನು ತೆರೆಯುವ ಮೂಲಕ ಕನ್ನಡ ಭಾಷೆಯ ಮೇಲಿನ ಪ್ರೇಮ ಮೆರೆದಿದ್ದಾರೆ ಎಂದು ಹೇಳಿದರು.ಗಡಿಭಾಗದಲ್ಲಿ ಹುಟ್ಟುವುದು ಪೂರ್ವಜನ್ಮದ ಪುಣ್ಯವಾಗಿದೆ. ಕಾರಣ ಎರಡು ಭಾಷೆಗಳ ಕಲಿಯಲು ಸಹಕಾರಿ ಹಾಗೂ ಎರಡು ರಾಜ್ಯಗಳ ಜನರ ಜೀವನ ಶೈಲಿ, ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಅನಕ್ಷರಸ್ಥರೂ ಕೂಡಾ ಕಲಿಯಲು ಸಾಧ್ಯವಾಗುತ್ತೆ ಎಂದರು.ಈ ಬಾರಿ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಮ್ಮೇಳನ ನೆಡೆಸಲು ಅವಕಾಶ ಸಿಕ್ಕಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ನಿಮ್ಮ ಲೆಕ್ಕಪತ್ರಗಳು ಏನೇ ಇದ್ದರೂ ಅದನ್ನು ನಿಮ್ಮೊಳಗೆ ಬಗೆಹರಿಸಿಕೊಳ್ಳಿ ಇದು ಸಮ್ಮೇಳನದ ಮೇಲೆ ಬೇರೆ ರೀತಿಯ ಪರಿಣಾಮ ಬೀರಬಾರದು ಎಂದರು.