ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್ ಮಕ್ಕಳಿಗೆ ಬೇಕಾದ ಶಿಕ್ಷಣದ ಪೂರಕ ಮಾಹಿತಿಯ ಜ್ಞಾನವನ್ನು ಪ್ರತಿದಿನ ಹೊತ್ತು ತರುವ ಕನ್ನಡಪ್ರಭ ಯುವ ಆವೃತ್ತಿಯಿಂದ ಜ್ಞಾನ ವೃದ್ಧಿ ಆಗಲಿದೆ ಎಂದು ಕನ್ನಡಪ್ರಭ ಪತ್ರಿಕೆಯ ಸಮನ್ವಯ ಹಾಗೂ ವಿಶೇಷ ಯೋಜನಾ ಸಂಪಾದಕರಾದ ಬಿ.ವಿ.ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ. ಪಟ್ಟಣದ ಜ್ಞಾನಭಾರತಿ ವಿದ್ಯಾ ಸಂಸ್ಥೆ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡಪ್ರಭ ಪತ್ರಿಕೆ ವಿದ್ಯಾರ್ಥಿಗಳಿಗೆ ಪೂರಕವಾದ ಪಠ್ಯವಿಚಾರ ಗಣಿತ, ವಿಜ್ಞಾನ, ಸಮಾಜ ಸೇರಿದಂತೆ ಹಲವಾರು ವಿಭಿನ್ನವಾದ ರೀತಿಯ ವಿಷಯಗಳನ್ನು ಮಕ್ಕಳಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಕೇವಲ ಒಂದು ರುಪಾಯಿಗೆ ಪತ್ರಿಕೆಯನ್ನು ನೀಡುವ ಕೆಲಸ ಮಾಡುತ್ತಿದ್ದು ಮಕ್ಕಳು ಖರೀದಿ ಮಾಡಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದರು. ಜ್ಞಾನಭಾರತಿ ವಿದ್ಯಾ ಸಂಸ್ಥೆ ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿದೆ. ತಾಲೂಕಿಗೆ ಪ್ರಥಮ ಸ್ಥಾನವನ್ನು ಎಂದಿಗೂ ಬಿಟ್ಟು ಕೊಟ್ಟಿಲ್ಲ. ಇಂತಹ ವಿಶೇಷವಾದ ಶಾಲೆಗಳು ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದಕ್ಕೆ ಅಭಿನಂದನೆಗಳು ಎಂದರು. ಕುಣಿಗಲ್ ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ಮಾತನಾಡಿ, ಕಲಿಯುವುದು ನಿರಂತರ ಅಭ್ಯಾಸ ಆಗಬೇಕು. ಮೊಬೈಲ್ ಬಳಕೆಯಿಂದ ದೂರ ಇರಬೇಕಾದರೆ ಪತ್ರಿಕೆ ಓದುವ ಹವ್ಯಾಸವನ್ನು ಬೆಳಸಿಕೊಳ್ಳಿ ಬಿಡುವಿನ ವೇಳೆಯಲ್ಲಿ ಕನ್ನಡಪ್ರಭ ಹೊರತಂದಿರುವ ಯುವ ಆವೃತ್ತಿ ಪತ್ರಿಕೆಯನ್ನು ಓದುತ್ತಾ ನಿಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದರು. ಜ್ಞಾನದ ಮಟ್ಟ ಹೆಚ್ಚು ಆಗುತ್ತದೆ ಎಂಬುದಕ್ಕೆ ಹಲವಾರು ಪತ್ರಿಕೆಗಳಲ್ಲಿ ಬಂದ ವಿಚಾರಗಳು ಮನನ ಮಾಡಿದಾಗ ನಿಮಗೆ ಬುದ್ಧಿಯ ತೀಕ್ಷ್ಣತೆ ಹೆಚ್ಚಾಗುತ್ತದೆ. ಸಮಾಜದ ಹಲವಾರು ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ಸಾಂದರ್ಭಿಕ ಸಮಸ್ಯೆ ಹಾಗೂ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬಹುದೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ ಬಿ ರಾಮಸ್ವಾಮಿಗೌಡ ಮಕ್ಕಳ ಜೀವನ ಬಿಳಿಯ ಹಾಳೆ ಇದ್ದಂತೆ ನಾವುಗಳು ಅದನ್ನು ಹೇಗೆ ರೂಪಿಸುತ್ತೇವೆ ಎಂಬುದಕ್ಕೆ ನಿರ್ಧಾರ ಆಗಿರುತ್ತೆ. ಉತ್ತಮ ಶಿಕ್ಷಕರು ಅದನ್ನು ಸ್ಪಂದಿಸುವ ಮಕ್ಕಳು ಪ್ರತಿಯೊಬ್ಬರೂ ಕೂಡ ಉತ್ತಮವಾದ ಗುರಿ ಹಾಗೂ ಶಿಕ್ಷಕರ ನೆರವಿನಿಂದ ಎಲ್ಲವನ್ನು ಸಾಧಿಸಲು ಸಾಧ್ಯವಾಗುತ್ತಿದೆ ಎಂದರು. ಜ್ಞಾನಭಾರತಿ ಶಾಲೆಯಲ್ಲಿ ನಿಮ್ಮಂತೆ ಕಲಿತು ಇಂದು ವೈದ್ಯರಾಗಿ ಅಥವಾ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಳೆ ವಿದ್ಯಾರ್ಥಿಗಳು ನಿಮ್ಮ ಮುಂದೆ ಇರುವುದಕ್ಕೆ ಅವರ ಸಾಧನೆಯ ಕಾರಣವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಶಿಕ್ಷಣದ ಜವಾಬ್ದಾರಿ ಜೊತೆಗೆ ಪಠ್ಯ ಮತ್ತು ಪತ್ರಿಕೆಗಳನ್ನು ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು. ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿಗಳು ಹೂಗುಚ್ಛ ನೀಡುವ ಮುಖಾಂತರ ಸ್ವಾಗತಿಸಿದರು. ಹಳೆ ವಿದ್ಯಾರ್ಥಿಗಳಾದ ಡಾ.ಶರತ್ ಮತ್ತು ಎಂಜಿನಿಯರ್ ಸುನೀಲ್ ತಮ್ಮ ಓದಿದ ಸಮಯದ ಅನುಭವ ಮತ್ತು ತಾವು ಹುದ್ದೆ ಪಡೆದ ಜವಾಬ್ದಾರಿಯುತ ವಿಚಾರಗಳನ್ನು ಮಕ್ಕಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಗಿರೀಶ್ ಖಜಾಂಚಿ ಶಿವಣ್ಣಗೌಡ ನಿರ್ದೇಶಕರಾದ ಶಿವರಾಮಯ್ಯ ಸೀತಾರಾಮಯ್ಯ ಕೆ ಎಚ್ ಗೌಡ, ಲಕ್ಷ್ಮಣ್ ಗೌಡ ಬೆಟ್ಟಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಪನಿ ಪಾಳ್ಯ, ರಮೇಶ್, ಗೋವಿಂದೇಗೌಡ, ಪ್ರಕಾಶ್, ಮೂರ್ತಿ, ಗಂಗಮ್ಮ ಸೇರಿದಂತೆ ಹಲವಾರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.