ಚಾಮುಂಡೇಶ್ವರಿ ದೇಗುಲಕ್ಕೆ ಹರಿದುಬಂದ ಭಕ್ತಸಾಗರ

| Published : Jul 19 2025, 02:00 AM IST

ಚಾಮುಂಡೇಶ್ವರಿ ದೇಗುಲಕ್ಕೆ ಹರಿದುಬಂದ ಭಕ್ತಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ದೇವಾಲಯದ ಸುತ್ತಮುತ್ತ ಹಾಗೂ ದೇವಾಲಯದಲ್ಲಿರುವ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಗೆ ವಿಶೇಷ ಹೂಗಳಿಂದ ಅಲಂಕಾರ

ಕನ್ನಡಪ್ರಭ ವಾರ್ತೆ ನಂಜನಗೂಡು ಕೊನೆಯ ಆಷಾಢ ಶುಕ್ರವಾರದ ಪ್ರಯುಕ್ತ ನಂಜನಗೂಡಿನ ಕಪಿಲಾ ನದಿ ತೀರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ತಾಲೂಕಿನ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಉದ್ದನೆಯ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.ಕೊನೆಯ ಆಷಾಢ ಶುಕ್ರವಾರ ಪ್ರಯುಕ್ತ ಮುಂಜಾನೆಯಿಂದಲೇ ಅಮ್ಮನವರಿಗೆ ಹಾಲು, ಮೊಸರು, ಜೇನುತುಪ್ಪ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳನ್ನು ಸಾಂಗೋಪವಾಗಿ ನೆರವೇರಿಸಿ ಮಹಾ ಮಂಗಳಾರತಿ ನೆರವೇರಿಸಿದ ನಂತರ ಭಕ್ತಾಧಿಗಳ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.ದೇವಾಲಯದ ಸುತ್ತಮುತ್ತ ಹಾಗೂ ದೇವಾಲಯದಲ್ಲಿರುವ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಗೆ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಹರಕೆ ಕಟ್ಟಿ ಧನ್ಯತಾಭಾವದಿಂದ ಭಾವ ಪರವಶರಾದರು.ಮುಂಜಾನೆಯಿಂದಲೇ ಭಕ್ತಾದಿಗಳು ಅಮ್ಮನ ದರ್ಶನ ಪಡೆಯಲು ಉದ್ದನೆಯ ಸಾಲಿನಲ್ಲಿ ನಿಂತು ದೇವಾಲಯದ ಆವರಣದಲ್ಲಿ ನಿಂಬೆಹಣ್ಣಿನ ದೀಪದ ಆರತಿಯನ್ನು ಮಾಡಿ ಹರಕೆ ತೀರಿಸಿ, ಮುತೈದೆಯರು ಬನ್ನಿ ಮರವನ್ನು ಪ್ರದಕ್ಷಿಣೆ ಮಾಡಿ ಮುತ್ತೈದೆಯರಿಗೆ ಬಳೆ ಅರಿಸಿನ ಕುಂಕುಮ ಬಾಗೀನ ನೀಡಿ, ಮದುವೆಯಾಗದ ಮಹಿಳೆಯರು ಕಂಕಣ ಭಾಗ್ಯ ಕೂಡಿ ಬರಲಿ ಎಂದು ದೀಪ ಹಚ್ಚಿದರೆ ಮದುವೆಯಾದವರು ಮಕ್ಕಳ ಭಾಗ್ಯ ದೊರಕಿಸುವಂತೆ ಹರಕೆ ಕಟ್ಟುವ ದೃಶ್ಯ ಸಾಮಾನ್ಯವಾಗಿತ್ತು. ವಿವಿಧ ಸಂಘ ಸಂಸ್ಥೆಗಳವರು ಪ್ರಸಾದ ವಿನಿಯೋಗ ಮಾಡಿದರು. ಚಾಮುಂಡೇಶ್ವರಿ ದೇಗುಲದಲ್ಲಿ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಶ್ರೀ ಕಂಠೇಶ್ವರಸ್ವಾಮಿ ದೇಗುಲದ ಇಓ ಜಗದೀಶ್ ನೇತೃತ್ವದಲ್ಲಿ ಸುಗಮ ವ್ಯವಸ್ಥೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಿತ್ತು.ತಾಲೂಕಿನ ತಾಂಡವಪುರ ಗ್ರಾಮದಲ್ಲಿ ಕೊನೆಯ ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡೇಶ್ವರಿ ಅಮ್ಮ ಅವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮಹದೇವು, ಯಜಮಾನರಾದ ಹುಚ್ಛೆಗೌಡ, ಬಿ.ಎಂ. ನಾಗರಾಜು, ಯುವ ಮುಖಂಡರಾದ ರಾಕೇಶ್, ನಾರಾಯಣ ಇದ್ದರು.