ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶಿರ್ವ ಗ್ರಾಮದ ವ್ಯಾಪ್ತಿಗೆ ಒಳಪಡುವ ಮಾಣಿಬೆಟ್ಟು ಎಂಬಲ್ಲಿನ ಶತಮಾನಗಳಷ್ಟು ಪ್ರಾಚೀನ ಪುಷ್ಕರಣಿಯ ಸ್ವಚ್ಛತಾ ಕಾರ್ಯವನ್ನು ಭಾನುವಾರ ನಡೆಸಲಾಯಿತು.ಈ ಕಾರ್ಯಕ್ರಮವನ್ನು ಸಮಾಜ ಸೇವಕ ಮತ್ತು ದಾನಿ ವಿಶ್ವನಾಥ್ ಶೆಣೈ ಉದ್ಘಾಟಿಸಿದರು. ಪುಷ್ಕರಣಿಯಿರುವ ಸ್ಥಳದ ಮಾಲೀಕ ಬಾಲಕೃಷ್ಣ ಉಪಾಧ್ಯಾಯ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಮುಖ್ಯ ಸಂಯೋಜಕ ಕುಕ್ಕೆ ಸುಬ್ರಹ್ಮಣ್ಯದ ಶ್ರೀನಿಕೇತನ ವಸ್ತುಸಂಗ್ರಹಾಲಯ - ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠದ ಉಪನಿರ್ದೇಶಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ, ಸಹ ಸಂಯೋಜಕರಾಗಿ ಉಡುಪಿಯ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ. ಎಸ್.ಎ. ಕೃಷ್ಣಯ್ಯ ಮತ್ತು ಉಡುಪಿಗೆ ಬನ್ನಿ ಯೂಟ್ಯೂಬ್ ಚಾನೆಲ್ನ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಉಪಸ್ಥಿತರಿದ್ದರು.
ಗತವೈಭವನ್ನು ಮುಂದಿನ ಪೀಳಿಗೆಗೆ ತಿಳಿಸಲು ಇಂತಹ ಇತಿಹಾಸ ಉಳಿಸಿ, ಸಂರಕ್ಷಿಸುವ ಕಾರ್ಯಗಳು ಇನ್ನೂ ನಡೆಯಬೇಕು. ನಮ್ಮಲ್ಲಿ ಇತಿಹಾಸದ ಪ್ರಜ್ಞೆ ಮೂಡಲು ಪ್ರಾಚ್ಯ ತೌಳವ ಕರ್ಣಾಟದ ಈ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಉಡುಪಿಯ ಕ್ರೆಡಿಟ್ ಕೊ- ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ ಉಮೇಶ್ ಆಚಾರ್ಯ ಹೇಳಿದರು.ಈ ಪುಷ್ಕರಣಿಯು ಶಿರ್ವ ಗ್ರಾಮದಲ್ಲಿಯೇ ಪ್ರಾಚೀನವಾದುದಾಗಿದ್ದು, ಸುಮಾರು 14-15ನೇ ಶತಮಾನಕ್ಕೆ ಸೇರಿದೆ. ಈ ಪುಷ್ಕರಣಿಯು ವಿನಾಶದಂಚಿನಲ್ಲಿದ್ದು, ಇದನ್ನು ಸ್ಥಳೀಯರ, ಇತಿಹಾಸ ಆಸಕ್ತರ, ಉತ್ಸಾಹಿ ವಿದ್ಯಾರ್ಥಿಗಳ, ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ರಕ್ಷಿಸುವ ಕಾರ್ಯ ನಡೆಯಿತು. ಇಲ್ಲಿಯೇ ಇರುವ 14ನೇ ಶತಮಾನದ ಅಪೂರ್ಣ ಶಾಸನದ ಸಂರಕ್ಷಣೆಯನ್ನು ಸಹ ಮಾಡಲಾಯಿತು. ಕಾರ್ಯಕ್ರಮವನ್ನು ಶ್ರಾವ್ಯಾ ಆರ್. ಸಂಯೋಜಿಸಿದರು.