- ಬೆಸ್ಕಾಂ ಎಇಇ, ತಹಸೀಲ್ದಾರ್‌ ಮುಖೇನ ಇಂಧನ ಸಚಿವರಿಗೆ ಮನವಿ ಪತ್ರ ರವಾನೆ

- - -

ಕನ್ನಡಪ್ರಭ ವಾರ್ತೆ ​ಜಗಳೂರು

ವಿದ್ಯುತ್ ವಲಯ ಖಾಸಗೀಕರಣಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಪದಾಧಿಕಾರಿಗಳು ಜಗಳೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಬೆಸ್ಕಾಂ ಎಇಇ ಮಲ್ಲಿಕಾರ್ಜುನ್ ಹಾಗೂ ಗ್ರೇಡ್-2 ತಹಸೀಲ್ದಾರ್ ಮಂಜಾನಂದ್ ಅವರ ಮೂಲಕ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

​ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ತಾಲೂಕು ಅಧ್ಯಕ್ಷ ಮಹಾಂತೇಶ್ ಮಾತನಾಡಿ, ಟಾಟಾ ಪವರ್ ಕಂಪನಿ ಲಿಮಿಟೆಡ್‌ಗೆ ವಿದ್ಯುತ್‌ ನಿರ್ವಹಣೆ ವಹಿಸಲು ನಿರ್ಧರಿಸಿರುವುದು ತೀರಾ ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ಮೊಂಡುತನ ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.


​ಕರವೇ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶಾಹೀನ ಬೇಗಂ ಮಾತನಾಡಿ, ವಿದ್ಯುತ್‌ನಂತಹ ಅತ್ಯಗತ್ಯ ಸೇವೆಯನ್ನು ಖಾಸಗೀಕರಣಗೊಳಿಸಿದರೆ ಕರವೇ ಸುಮ್ಮನಿರುವುದಿಲ್ಲ. ರಾಜ್ಯದ ಎಲ್ಲ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ತಡೆದು ತೀವ್ರ ರೀತಿಯಲ್ಲಿ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ಸಂಘಟನೆ ಗೌರವಾಧ್ಯಕ್ಷ ಸಂಗೊಳ್ಳಿ ಸುರೇಶ್ ಮಾತನಾಡಿ, ವಿದ್ಯುತ್‌ ವ್ಯವಸ್ಥೆ ಟಾಟಾ ಪವರ್ ಲಿಮಿಟೆಡ್ ಕಂಪನಿಗೆ ನೀಡಿ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಇದನ್ನು ವಿರೋಧಿಸಿ ಈಗಾಗಲೇ ಜಗಳೂರು ತಾಲೂಕಿನ 5 ಉಪ ಕೇಂದ್ರಗಳಿಂದ ರೈತರು ಹಾಗೂ ವಿವಿಧ ಸಂಘಟನೆಗಳು ಸೇರಿ ಒಟ್ಟು 26,400 ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದರು.

ಮನವಿ ಸಲ್ಲಿಸುವ ವೇಳೆ ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಹರ್ಷ, ಉಪಾಧ್ಯಕ್ಷರಾದ ಹಫೀಸ್, ಜಗದೀಶ್ ಕೆ.ಎಂ., ಮುನ್ನಾ, ಯುವ ಘಟಕದ ಅಧ್ಯಕ್ಷ ಶಿವಾಜಿ, ಗೌಡ್ರು ಮಂಜುಳಾ, ಚಂಪಾವತಿ, ತಾಲೂಕು ರೈತ ಘಟಕದ ಅಧ್ಯಕ್ಷ ಬಿ.ತಿಪ್ಪೇಸ್ವಾಮಿ, ಸುಭೇಂದ್ರ, ಮಂಜುನಾಥ್, ಕಸಬಾ ಹೋಬಳಿ ಮಹಿಳಾ ಅಧ್ಯಕ್ಷೆ ಲಕ್ಷ್ಮೀ, ಫರ್ಜನ್, ಶಾಂತಮ್ಮ, ಮಾಲಾ, ವೆಂಕಟೇಶ, ಗೌರಮ್ಮನಹಳ್ಳಿ ಮನೋಜ್, ಕರವೇ ನೂರಾರು ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.