- ಅಧಿಕಾರಿಗಳ ಲೋಪ, ನಿರ್ಲಕ್ಷ್ಯ, ಅಸಡ್ಡೆ ಖಂಡಿಸಿ ನಾರಾಯಣಗೌಡ ಬಣ ಹೋರಾಟ
- ನಗರಸಭೆ ದುರಾಡಳಿತ ಮುಂದುವರೆಯದಂತೆ ಎಚ್ಚರಿಕೆ । ಪ್ರಭಾರ ಆಯುಕ್ತರಿಗೆ ದೂರು--
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲನಗರಸಭೆಯ ದುರಾಡಳಿತ, ಭ್ರಷ್ಟಾಚಾರ ಮತ್ತು ವಿಳಂಬ ನೀತಿ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದಿಂದ ಗುರುವಾರ ಪ್ರತಿಭಟನೆ ನಡೆಯಿತು.ಪಟ್ಟಣದ ಬಸ್ ನಿಲ್ದಾಣದಿಂದ ಕರವೇ ತಾಲೂಕು ಅಧ್ಯಕ್ಷ ಮೆಹಬೂಬ್ ಪಾಷ ನೇತೃತ್ವದಲ್ಲಿ ನಗರಸಭೆ ಆಡಳಿತ ವಿರುದ್ಧ ಘೋಷಣೆ ಕೂಗುವ ಮೂಲಕ ಡಾ. ರಾಜಕುಮಾರ್, ಡಾ. ಅಂಬೇಡ್ಕರ್ ರಸ್ತೆ ಮೂಲಕ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ಪ್ರಭಾರ ಪೌರಾಯುಕ್ತರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.ನಗರಸಭೆಯ ವ್ಯಾಪ್ತಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಭ್ರಷ್ಟಾಚಾರ, ಅಧಿಕಾರಿಗಳ ಲಂಚಾವತಾರ ಮತ್ತು ಸಾರ್ವಜನಿಕ ಕೆಲಸಗಳಲ್ಲಿನ ತೀವ್ರ ನಿರ್ಲಕ್ಷ್ಯವನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟಿಸುತ್ತಿದೆ.ಖಾತೆ ಬದಲಾವಣೆ, ಕಟ್ಟಡ ನಕ್ಷೆ ಮಂಜೂರಾತಿ, ಜನನ-ಮರಣ ಪ್ರಮಾಣಪತ್ರ ಸೇರಿದಂತೆ ವಿವಿಧ ಅಗತ್ಯ ಸೇವೆಗಳಿಗಾಗಿ ಅರ್ಜಿ ಸಲ್ಲಿಸಿ ಸಾರ್ವಜನಿಕರು ಅಲೆದಾಡುತ್ತಿದ್ದಾರೆ. ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಪ್ರತಿಯೊಂದು ಸಣ್ಣ ಕೆಲಸಕ್ಕೂ ಸಾರ್ವಜನಿಕರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿಸಿಕೊಳ್ಳಲು ಬರುವ ನಾಗರಿಕರಿಗೆ ಅನಗತ್ಯವಾಗಿ ಅಲೆದಾಡಿಸಿ ಕಿರುಕುಳ ನೀಡಲಾಗುತ್ತಿದೆ. ಪಟ್ಟಣದ ರಸ್ತೆಗಳ ದುರಸ್ತಿ, ಕುಡಿಯುವ ನೀರಿನ ಪೂರೈಕೆ, ಕಸ ವಿಲೇವಾರಿ ಮತ್ತು ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದರೂ ನಗರಸಭೆ ಕಣ್ಣು ಮುಚ್ಚಿ ಕುಳಿತಿದೆ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸಾರ್ವಜನಿಕ ಹಣ ಪೋಲಾಗುತ್ತಿದೆ. ನಾಗರಿಕರು ಕಟ್ಟುವ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳು ಸಾರ್ವಜನಿಕರನ್ನು ಗುಲಾಮರಂತೆ ಕಾಣುತ್ತಿದ್ದಾರೆ. ನಿಯಮಿತ ಅವಧಿಯಲ್ಲಿ ಕೆಲಸ ಮಾಡಿಕೊಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.ಈ ಮೂಲಕ ನಗರಸಭೆಯ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮತ್ತು ಭ್ರಷ್ಟ ಅಧಿಕಾರಿಗಳಿಗೆ ನಮ್ಮ ಕರವೇ ವತಿಯಿಂದ ಎಚ್ಚರಿಕೆ ನೀಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು ಎಂದು ಪ್ರತಿಭನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಚ್.ಎನ್. ಮಂಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೂಪೇಶ್, ಸಂಘಟನಾ ಕಾರ್ಯದರ್ಶಿ ಹೇಮಂತ್, ನಗರ ತಾಲೂಕು ಕಾರ್ಯದರ್ಶಿ ಅಸಾದ್, ಉಪಾಧ್ಯಕ್ಷ ಅಭಿಷೇಕ್. ಆರ್, ಜಂಟಿ ಕಾರ್ಯದರ್ಶಿ ಶಾಂತರಾಜು, ಕಾರ್ಯದರ್ಶಿ ತಬರೆಸ್ ಪಾಷ, ಸವಣ್ಣ ಮುಳ್ಳೂರು, ಸಂಚಾಲಕರು ಇಫ್ರಾನ್, ನಯಾಜ್ ಪಾಷ, ತೌಸೀಫ್ ಬೇಗ್, ಯಳಂದೂರು ಮಹದೇವಸ್ವಾಮಿ, ಇಸ್ಮಾಯಿಲ್ ಸೇರಿ ಹಲವರು ಭಾಗವಹಿಸಿದ್ದರು.--- 4ಕೆಜಿಎಲ್ಕೊಳ್ಳೇಗಾಲ ಪಟ್ಟಣದ ನಗರಸಭೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಪ್ರತಿಭಟನೆ ನಡೆಸಿ ಪ್ರಭಾರ ಆಯುಕ್ತರಿಗೆ ಮನವಿ ಸಲ್ಲಿಸಿತು. ಮಂಜೇಶ್, ಮೊಹಬೂಬ್ ಪಾಶಾ, ಮಹದೇವಸ್ವಾಮಿ, ಶಾಂತರಾಜು ಇನ್ನಿತರಿದ್ದರು.