ಸಾರಾಂಶ
ಸ್ಟೇಶನ್ ತಾಂಡಾವು ವಾರ್ಡ್ ನಂ ೮ ರಲ್ಲಿ ಬರುತ್ತಿದ್ದು, ಇಲ್ಲಿನ ಮನೆಗಳ ಬಳಿ ಚರಂಡಿಯು ಹಲವು ತಿಂಗಳುಗಳಿಂದ ಸ್ವಚ್ಛತೆ ಮಾಡದಿರುವುದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಸಾರ್ವಜನಿಕರು ಮಾರಕ ರೋಗಗಳಿಗೆ ತುತ್ತಾಗುವ ಭೀತಿಯಲ್ಲಿದ್ದಾರೆ. ಕೂಡಲೇ ಚರಂಡಿ ಸ್ವಚ್ಛತೆ ಮಾಡಬೆಕೇಂದು ಪುರಸಭೆ ಮುಖ್ಯಾಧಿಕಾರಿ ಸಂಜೀವ ಮಾಂಗ್ಗೆ ಮನವಿ ಸಲ್ಲಿಸಲಾಯಿತು.
ಕನ್ನಡ ಪ್ರಭ ವಾರ್ತೆ ಚಿತ್ತಾಪುರ
ಪುರಸಭೆ ವ್ಯಾಪ್ತಿಯಲ್ಲಿ ಬರುವ ಸ್ಟೇಶನ್ ತಾಂಡಾ ವಾರ್ಡ್ 8ರಲ್ಲಿ ಚರಂಡಿ ತುಂಬಿ ತಿಂಗಳುಗಳೇ ಕಳದರೂ ಅದನ್ನು ಸ್ವಚ್ಛತೆ ಮಾಡಲು ಮುಂದಾಗದೇ ಇರುವ ಕಾರಣ ಅಲ್ಲಿನ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುವ ಭೀತಿಯಿದೆ ಎಂದು ಕರವೇ (ನಾರಾಯಣಗೌಡ) ತಾಲೂಕು ಚಂದರ್ ಚವ್ವಾಣ ತಿಳಿಸಿದ್ದಾರೆ.ಸ್ಟೇಶನ್ ತಾಂಡಾವು ವಾರ್ಡ್ ನಂ ೮ ರಲ್ಲಿ ಬರುತ್ತಿದ್ದು, ಇಲ್ಲಿನ ನಿವಾಸಿಗಳಾದ ಪ್ರವೀಣ ಪವಾರ್ ಮನೆಯಿಂದ ರಾಮು ರೆಡ್ಡಿ ಚವ್ವಾಣ ಮನೆಯವರೆಗೆ ಇರುವ ಚರಂಡಿಯು ಹಲವು ತಿಂಗಳುಗಳಿಂದ ಸ್ವಚ್ಛತೆ ಮಾಡದೇ ಇರುವುದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ನಿವಾಸಿಗಳು ಮಲೆರಿಯಾ, ಟೈಫಾಯ್ಡ್, ಡೆಂಘೀ ಮತ್ತು ಕಾಲರಾದಂತಹ ಮಾರಕ ರೋಗಗಳಿಗೆ ತುತ್ತಾಗುವ ಭೀತಿಯಲ್ಲಿದ್ದಾರೆ. ಇದರ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ ಕೂಡಾ ಯಾರು ಕೂಡಾ ಸಮಸ್ಯೆಗೆ ಸ್ಪಂದಿಸುತ್ತಿಲ್ಲಾ.
ಈಗಲಾದರೂ ಪುರಸಭೆ ಎಚ್ಚತ್ತುಕೊಂಡು ಅಲ್ಲಿನ ನಿವಾಸಿಗಳ ಆರೋಗ್ಯದ ಹಿತದೃಷ್ಟಿಯಿಂದ ಚರಂಡಿ ಸ್ವಚ್ಚಗೊಳಿಸಬೇಕು. ಇಲ್ಲವಾದಲ್ಲಿ ಕರವೇ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಂಡು ಇದರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸುವ ಮನವಿ ಪತ್ರವನ್ನು ಪುರಸಭೆ ಮುಖ್ಯಾಧಿಕಾರಿ ಸಂಜೀವ ಮಾಂಗ್ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.ಬಿಜೆಪಿ ಮುಖಂಡ ಶಿವರಾಮ ಚವ್ವಾಣ, ಕರವೇಯ ವಿನೋದ ಚವ್ವಾಣ, ಗೋಪಾಲ ಚವ್ವಾಣ, ಸಂತೋಷ ಚವ್ವಾಣ ಸಂಜಯ ರಾಠೋಡ ಇತರರು ಇದ್ದರು.