ಸಾರಾಂಶ
ಹೊಳೆನರಸೀಪುರ: ಕಾರ್ಗಿಲ್ ವಿಜಯ್ ದಿವಸ್ ಭಾರತೀಯರಿಗೆ ಹೆಮ್ಮೆಯ ವಿಷಯವಾದರೂ ಸಹ ಅಂದು ಯುದ್ಧದಲ್ಲಿ ವೀರ ಮರಣ ಹೊಂದಿ ಹುತಾತ್ಮರಾದ ವೀರ ಯೋಧರ ಸ್ಮರಣೆ, ಗೌರವ ಸಮರ್ಪಣೆ ಮತ್ತು ಅವರ ಕುಟುಂಬ ಸದಸ್ಯರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡುವುದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದು ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ ತಿಳಿಸಿದರು. ಪಟ್ಟಣದ ಸುಭಾಷ್ ವೃತ್ತದಲ್ಲಿ ನಿವೃತ್ತ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವೀರ ಯೋಧರಿಗೆ ಆತ್ಮಸ್ಥೈರ್ಯ ತುಂಬುತ್ತಾ ಅಗತ್ಯ ಸಮಯದಲ್ಲಿ ಯೋಧ ಕುಟುಂಬ ಸದಸ್ಯರ ಜತೆಗೆ ನಿಲ್ಲುವ ದೇಶಾಭಿಮಾನಿಗಳ ಕಾರ್ಯ ಅಭಿನಂದನೀಯ ಎಂದು ತಿಳಿಸಿ, ಹುತಾತ್ಮ ವೀರ ಯೋಧರನ್ನು ಸ್ಮರಿಸಿದರು. ನಿವೃತ್ತ ಯೋಧರ ಸಂಘದ ಅಧ್ಯಕ್ಷ ಈಶ್ವರ್ ಅವರು ದೀಪ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ, ಪುಷ್ಪನಮನ ಸಲ್ಲಿಸಿದರು. ನಿವೃತ್ತ ಯೋಧರಾದ ವಸಂತ ಕುಮಾರ್ ಎಚ್.ಡಿ. ರಾಷ್ಟ್ರಗೀತೆ ಹಾಡಿ, ಧ್ವಜ ವಂದನೆ ಸಲ್ಲಿಸಿದರು ಹಾಗೂ ಜಾನಪದ ಕಲಾವಿದ ನಾಗರಾಜ್ ಅವರು ದೇಶಭಕ್ತಿ ಗೀತೆ ಹಾಡಿದರು. ನಿವೃತ್ತ ಯೋಧರಾದ ಮಂಜುನಾಥ್, ಮಂಜೇಗೌಡ, ಪ್ರಕಾಶ್, ರವಿಕುಮಾರ್, ಮಹದೇವಯ್ಯ, ಚನ್ನಕೇಶವ ಹಾಗೂ ಬಂಗಾರಿ, ಯೋಧರಾದ ತಾತನಹಳ್ಳಿ ಯತೀಶ್, ಸಮಾಜ ಸೇವಕ ಶಂಕರನಾರಾಯಣ ಐತಾಳ್, ವಿಜಯಕುಮಾರಿ, ದಯಾನಂದ, ಮಹೇಶ್, ನಾಗೇಂದ್ರ, ಇತರರು ಉಪಸ್ಥಿತರಿದ್ದು, ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿ, ಕಂಬನಿ ಮಿಡಿದರು.