ಅಜೆಕಾರು-ದೆಪ್ಪುತ್ತೆ-ಕಡ್ತಲ ರಸ್ತೆಯ ನಿರ್ಮಾಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವು ಲೋಕೋಪಯೋಗಿ ಇಲಾಖೆಯ ಮೂಲಕ 2 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ

ಕಾರ್ಕಳ: ಕಾರ್ಕಳ ತಾಲೂಕಿನ ಅಜೆಕಾರು-ದೆಪ್ಪುತ್ತೆ-ಕಡ್ತಲ ರಸ್ತೆಯ ನಿರ್ಮಾಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವು ಲೋಕೋಪಯೋಗಿ ಇಲಾಖೆಯ ಮೂಲಕ 2 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಅಜೆಕಾರು ಚರ್ಚ್ ಗೇಟ್‌ ಬಳಿ ನಡೆದ ಸುದ್ದಿಗೊಷ್ಠಿ ಹಾಗೂ ಸಚಿವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಅನುದಾನ ಬಿಡುಗಡೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಶಿಫಾರಸು ಕಾರಣವಾಗಿದೆ ಎಂದು ಉದಯಕುಮಾರ್ ಶೆಟ್ಟಿ ಹೇಳಿದರು. 20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ರಸ್ತೆ ನಿರ್ಮಾಣಕ್ಕೆ ಬಿಜೆಪಿಯಿಂದ ಯಾವುದೇ ಅನುದಾನ ಸಿಕ್ಕಿರಲಿಲ್ಲ ಎಂದು ಅವರು ಆರೋಪಿಸಿದರು. ಎರಡು ತಿಂಗಳೊಳಗೆ ರಸ್ತೆ ನಿರ್ಮಾಣ ಪ್ರಾರಂಭವಾಗಬೇಕು ಎಂದು ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ಶೇ. ಶೇ. 90 ಅನುಷ್ಠಾನಗೊಂಡಿದೆ ಎಂದರು.

ಚರ್ಚ್ ಫಾದರ್ ಹೆನ್ರಿ ಮಸ್ಕರೆನ್ಸ್ ಮಾತನಾಡಿ, ಪಕ್ಷಭೇದ ಮರೆತು ಗ್ರಾಮದ ಅಭಿವೃದ್ದಿಗೆ ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು. ಸ್ಥಳೀಯರಾದ ಕಾಂಗ್ರೆಸ್ ಮುಖಂಡ ಮೌರಿಸ್ ತಾವ್ರೊ, ಅಜೆಕಾರು ಸಂತೋಷ್ ಶೆಟ್ಟಿ, ಗ್ರಾ.ಪಂ. ಸದಸ್ಯ ಅಬ್ದುಲ್ ಗಪೂರ್, ಜಾನ್ ಟೆಲ್ಲಿಸ್, ಮಾಜಿ ಅಧ್ಯಕ್ಷ ಯಶೋದ ಶೆಟ್ಟಿ, ಚರಿತ್ರ ಎಂ., ಅರುಣ್ ಡಿಸೋಜ, ಸ್ಟೀವನ್ ಲೊಬೊ, ಸಂದೀಪ್ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸತೀಶ್ ಅಂಬೆಲ್ಕರ್ ನಿರೂಪಿಸಿದರು.