ಸಾರಾಂಶ
ಸೋಮವಾರಪೇಟೆ : ಕರ್ನಾಟಕ ಛಾಯಾ ರತ್ನ ಪ್ರಶಸ್ತಿಗೆ ಕೊಡಗಿನ ಮೂವರು ಛಾಯಾಗ್ರಾಹಕರು ಭಾಜನರಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಫೋಟೋಗ್ರಾಫಿ ಮತ್ತು ವಿಡಿಯೋಗ್ರಫಿ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ವೀಡಿಯೊ ಮತ್ತು ಫೊಟೋ ಅಸೋಸಿಯೇಷನ್ ಮತ್ತು ಬೈಸೇಲ್ ಇಂಟ್ರಾಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಫೊಟೋ ಟುಡೇ ವಸ್ತು ಪ್ರದರ್ಶನದಲ್ಲಿ ಕರ್ನಾಟಕ ಛಾಯಾ ರತ್ನ ಪ್ರಶಸ್ತಿಗೆ ದಕ್ಷಿಣ ಕೊಡಗು ಛಾಯಾಗ್ರಾಹಕರ ಸಂಘದ ಆರ್. ಜಾನ್, ಸೋಮವಾರಪೇಟೆ ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಹರೀಶ್ ಕೋಟ್ಯಾನ್ ಮತ್ತು ಶ್ರೀ ಕಾವೇರಿ ಛಾಯಾಗ್ರಾಹಕರ ಸಂಘದ ಎಸ್.ಆರ್. ಭರತ್ ಅವರಿಗೆ , ಹೆಸರಾಂತ ಹಿರಿಯ ಕನ್ನಡ ಚಲನಚಿತ್ರ ನಿರ್ದೇಶಕರು ಮತ್ತು ಕ್ಯಾಮೆರಾ ಮ್ಯಾನ್ ಜೆ.ಜೆ. ಕೃಷ್ಣ, ನಟ ಪ್ರಥಮ್, ಕಿರುತೆರೆ ನಟ ವಿಕ್ರಂ ಸೂರಿ ಮತ್ತು ಫೊಟೋ ಟುಡೇ ನಿರ್ದೇಶಕ ಹೆಚ್.ವಿ. ಕೃಷ್ಣಪ್ಪ ಅವರು ಕರ್ನಾಟಕ ಛಾಯಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ಎಸ್.ಆರ್. ವಸಂತ್, ಪ್ರಧಾನ ಕಾರ್ಯದರ್ಶಿ ಸಾಲೋಮನ್ ಡೇವಿಡ್, ದಕ್ಷಿಣ ಕೊಡಗು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಡಿ.ಸಿ. ರವೀಂದ್ರ, ಕುಶಾಲನಗರ ತಾಲೂಕು ಶ್ರೀ ಕಾವೇರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಸೋಮವಾರಪೇಟೆ ತಾಲೂಕು ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಿನೋದ್ ಜಯರಾಮ್ ಮತ್ತು ಸುಬ್ರಮಣಿ ಇದ್ದರು.