ಸಾರಾಂಶ
ತ್ತೀಚೆಗೆ ಸ್ಥಳೀಯ ಹಬ್ಬಗಳ ಹೆಸರನ್ನು ಅಪಭ್ರಂಶಗೊಳಿಸುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಅಂಗವಾಗಿ ನಗರದ ಡಿ. ದೇವರಾಜ ಅರಸು ರಸ್ತೆ, ವಿನೋಬ ರಸ್ತೆ, ಶಿವರಾಂಪೇಟೆ ಸುತ್ತಮುತ್ತಲ ಅಂಗಡಿ ಮುಂಗಟ್ಟುಗಳಿಗೆ ಕರ್ನಾಟಕ ಹಿತರಕ್ಷಣಾ ವೇದಿಕೆಯವರು ತೆರಳಿ ಗುಲಾಬಿ ನೀಡಿ, ಕನ್ನಡ ಪದಗಳನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ಅಭಿಯಾನ ನಡೆಸಿದರು.ಇತ್ತೀಚೆಗೆ ಸ್ಥಳೀಯ ಹಬ್ಬಗಳ ಹೆಸರನ್ನು ಅಪಭ್ರಂಶಗೊಳಿಸುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ದೀಪಾವಳಿಯನ್ನು ದಿವಾಳಿ ಎಂದು ಶುಭ ಕೋರುವುದು, ಹಾಗೆಯೇ ದಸರಾವನ್ನು ದುಸ್ಸೆರಾ ಎಂದು ತಪ್ಪಾಗಿ ಶುಭ ಕೋರುತ್ತಿರುವ ಅನ್ಯ ಭಾಷೆ ಶೈಲಿಯಲ್ಲಿ ಪದಬಳಕೆ ಶುಭ ಕೋರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ದೀಪಾವಳಿಯನ್ನು ದಿವಾಳಿಯೆಂದು ಬರೆದು ಶುಭ ಕೋರುತ್ತಿರುವದನ್ನು ಖಂಡಿಸಿ, ಅವರಿಗೆ ತಿಳಿ ಹೇಳಿ ದಯಮಾಡಿ ಕನ್ನಡವನ್ನು ಸರಿಯಾಗಿ ಪ್ರಯೋಗಿಸಿ ಗೌರವಿಸಿ ಎಂದು ಮನವಿ ಮಾಡಿದರು.ಈ ವೇಳೆ ವೇದಿಕೆಯ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಕನ್ನಡದಲ್ಲಿ ದಿವಾಳಿ ಎಂದರೆ ಎಲ್ಲವನ್ನೂ ಕಳೆದುಕೊಳ್ಳುವುದು ಎಂದರ್ಥವಿದೆ. ದಿವಾಳಿ ಹಬ್ಬ ಎಂದರೆ ಕನ್ನಡಿಗರು ಏನೆಂದು ತಿಳಿದುಕೊಳ್ಳಬೇಕು? ಅದರಲ್ಲೂ ಕನ್ನಡಿಗರು ಹಣ ಇಟ್ಟಿರುವ ಬ್ಯಾಂಕುಗಳೇ ಹೀಗೆ ಹಾರೈಸಿದರೆ, ಕನ್ನಡಿಗರಿಗೆ ಪರಿಚಯವಿರುವ ಹೆಸರುಗಳನ್ನೇ ಬಳಸಲು ತೊಂದರೆ ಏನು? ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಮೂಡಾ ಮಾಜಿ ಸದಸ್ಯ ನವೀನ್ ಕುಮಾರ್, ಮುಖಂಡರಾದ ಜಿ. ರಾಘವೇಂದ್ರ, ಎಸ್.ಎನ್. ರಾಜೇಶ್, ರವಿಚಂದ್ರ, ನಂಜುಂಡಸ್ವಾಮಿ, ಸಚಿನ್ ನಾಯಕ್, ದಿನೇಶ್, ರಾಕೇಶ್, ಶ್ರೀನಿವಾಸ್ ಮೊದಲಾದವರು ಇದ್ದರು.