ಸಾರಾಂಶ
ಕರ್ನಾಟಕ ಕ್ರೀಡಾಕೂಟದ 3ನೇ ದಿನ ಭಾನುವಾರ ಉಡುಪಿಯಲ್ಲಿ ನಡೆದ ಟೆಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಸ್ಪರ್ಧೆಗಳೆರಡರಲ್ಲೂ ಚಿನ್ನದ ಪದಕಗಳು ಬೆಂಗಳೂರು ಜಿಲ್ಲೆಯ ಕ್ರೀಡಾಪಟುಗಳ ಪಾಲಾಗಿವೆ.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ಕ್ರೀಡಾಕೂಟದ 3ನೇ ದಿನ ಭಾನುವಾರ ಉಡುಪಿಯಲ್ಲಿ ನಡೆದ ಟೆಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಸ್ಪರ್ಧೆಗಳೆರಡರಲ್ಲೂ ಚಿನ್ನದ ಪದಕಗಳು ಬೆಂಗಳೂರು ಜಿಲ್ಲೆಯ ಕ್ರೀಡಾಪಟುಗಳ ಪಾಲಾಗಿವೆ.ಪುರುಷರ ಸಿಂಗಲ್ಸ್ನಲ್ಲಿ ಬೆಂಗಳೂರಿನ ಅಶ್ವಿನ್ ಹನಗೂಡು ಅವರು ತಮ್ಮದೇ ಜಿಲ್ಲೆಯ ಸುದರ್ಶನ್ ಕುಮಾರ್ ಅವರನ್ನು 3- 2ರಲ್ಲಿ ಸೋಲಿಸಿ ಚಿನ್ನ ಗೆದ್ದರು. ಉತ್ತಮ ಸ್ಪರ್ಧೆ ನೀಡಿದ ಸುದರ್ಶನ್ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಬೆಂಗಳೂರಿನವರೇ ಆದ ಪ್ರೇಮ್ ಚಂದರ್ ಜಿ. ಮತ್ತು ಧಾರವಾಡದ ಚೇತನ್ ಅರಳಿಕಟ್ಟಿ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.ಮಹಿಳೆಯರ ಸಿಂಗಲ್ಸ್ನಲ್ಲಿ ಬೆಂಗಳೂರಿನ ಅನನ್ಯ ಎಚ್.ಪಿ. ಅವರು ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರೇ, ಅವರಿಂದ 3-2ರಲ್ಲಿ ಸೋತ ಧಾರವಾಡದ ಸಹನಾ ಕುಲಕರ್ಣಿ ಬೆಳ್ಳಿಯ ಪದಕ ತನ್ನದಾಗಿಸಿಕೊಂಡರು. ದಕ್ಷಿಣ ಕನ್ನಡ ಜಿಲ್ಲೆಯ ಆರ್ನಾಸದೋತ್ರ ಮತ್ತು ಬೆಂಗಳೂರಿನ ದೃಷ್ಟಿ ಎಸ್. ಮೋರೆ ಕಂಚಿನ ಪದಕಗಳಿಗೆ ತೃಪ್ತಿಪಟ್ಟರು.