ಕನ್ನಡಪ್ರಭ ವಾರ್ತೆ ಮೈಸೂರುಸಮಗ್ರ ಭಾರತ ರೂಪಿಸುವ ಹೊಣೆಗಾರಿಕೆಯನ್ನು ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರಿಗೆ ನೀಡಲಾಗಿತ್ತು. ಅವರು ಎಚ್ಚರ ತಪ್ಪಿದ್ದರೆ ಭಾರತದ ಸಮಗ್ರತೆ ಉಳಿಯುತ್ತಿರಲಿಲ್ಲ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಡಿ. ಮಾದೇಗೌಡ ತಿಳಿಸಿದರು.ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ವ್ಯವಸ್ಥಾಪನಾ ಮಂಡಳಿ ಸಭಾಂಗಣದಲ್ಲಿ ಗುರುವಾರ ನಡೆದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶ ವಿಭಜನೆಗೆ ಗಾಂಧೀಜಿ ಒಪ್ಪಿಗೆ ಸೂಚಿಸಿರಲಿಲ್ಲ. ಅವರಿಗೆ ಪಟೇಲ್‌ ಅದರ ಸಾಧಕ– ಬಾಧಕಗಳ ಮನವರಿಕೆ ಮಾಡಿಸಿದ್ದರು ಎಂದರು.ಸ್ವಾತಂತ್ರ್ಯ ಸಿಕ್ಕ ಬಳಿಕ 570 ಪ್ರಭುತ್ವವನ್ನು ಏಕೀಕರಣ ಮಾಡುವ ಸವಾಲು ಎದುರಾಯಿತು. ಆ ಸಮಯದಲ್ಲಿ ಪಟೇಲ್‌ ಅವರು ಸಂಧಾನ ನಡೆಸಿ, ಅದಕ್ಕೊಪ್ಪದ ಜುನಾಗಡ, ಹೈದರಾಬಾದ್, ಕಾಶ್ಮೀರವನ್ನು ಮನವೊಳಿಸಿದ್ದರು. ಮಾತಿಗೆ ಬಗ್ಗದ ಹೈದರಾಬಾದ್‌ ನಿಜಾಮರು ದೇಶದ ಸೈನ್ಯ ಬಲಕ್ಕೆ ಶರಣಾಗಿದ್ದರು ಎಂದು ಅವರು ಸ್ಮರಿಸಿದರು.ಹೈದರಾಬಾದ್‌ ಪ್ರಾಂತ್ಯ ಏಕೀಕರಣವಾಗದೆ ಉಳಿದಿದ್ದರೇ ಬೀದರ್, ಬಳ್ಳಾರಿ ನಮ್ಮ ಭಾಗವಾಗುತ್ತಿರಲಿಲ್ಲ. ಹೈದರಾಬಾದ್‌ ಮತ್ತೊಂದು ಕಾಶ್ಮೀರವಾಗುತ್ತಿತ್ತು. ಹೀಗಾಗಿ, ಕರ್ನಾಟಕವು ಆದ್ಯತೆ ಮೇಲೆ ಅವರನ್ನು ಸ್ಮರಿಸಿಕೊಳ್ಳಬೇಕು. ಆದರೆ, ನಮ್ಮಲ್ಲಿ ಅವರ ಜಯಂತಿ ಆಚರಣೆ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದರು.ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಎಸ್.ಕೆ. ನವೀನ್‌ ಕುಮಾರ್‌, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್. ಆನಂದ್ ಕುಮಾರ್, ಹಣಕಾಸು ಅಧಿಕಾರಿ ಪ್ರೊ.ಎಸ್. ನಿರಂಜನ್ ರಾಜ್, ಡೀನ್ ಗಳಾದ ಪ್ರೊ.ಎಂ. ರಾಮನಾಥಂ ನಾಯ್ಡು, ಡಾ.ಎನ್‌. ಆನಂದ ಗೌಡ ಮೊದಲಾದವರು ಇದ್ದರು.