ಕನ್ನಡಪ್ರಭ ವಾರ್ತೆ ಮಂಡ್ಯ
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಸಂಘ, ಕರ್ನಾಟಕ ಜಾನಪದ ಪರಿಷತ್ನಿಂದ ಜು.೨೭ ಮತ್ತು ೨೮ರಂದು ತಾಲೂಕಿನ ಕೊಮ್ಮೇರಹಳ್ಳಿಯ ವಿಶ್ವಮಾನವ ಕ್ಷೇತ್ರದ ಬಿಜಿಎಸ್ ಸಂಸ್ಥೆಯ ಕುವೆಂಪು ಸಭಾಭವನದಲ್ಲಿ ಕರ್ನಾಟಕ ತತ್ವಪದ ಗಾಯನ ಸಮಾವೇಶ ನಡೆಯಲಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ತಿಳಿಸಿದರು.ಅಂದು ಬೆಳಗ್ಗೆ ೧೦.೩೦ಕ್ಕೆ ತತ್ವಪದ ಸಮಾವೇಶದ ಚಾಲನೆ ಮತ್ತು ತತ್ವಪದ ಸಂಪದ ಸಂಚಿಕೆಯನ್ನು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯಚ ಬಿಡುಗಡೆ ಮಾಡುವರು. ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕ ಪಿ.ರವಿಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತತ್ವಪದ ಕ್ಷೇತ್ರದ ಅಧ್ಯಯನ ಮಾಡಿದ ಡಾ.ಮೀನಾಕ್ಷಿ ಬಾಳಿ ಸಮಾವೇಶದ ಅಧ್ಯಕ್ಷತೆ ವಹಿಸುವರು. ಜು.೨೮ರಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸುವರು. ಆದಿಚುಂಚನಗಿರಿ ಶಾಖಾಮಠದ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ, ಸಾನ್ನಿಧ್ಯ ವಹಿಸುವರು. ಡಾ.ಮೀನಾಕ್ಷಿ ಬಾಳಿ ಅವರು ಅಧ್ಯಕ್ಷತೆ ವಹಿಸುವರು. ತತ್ವಪದಕಾರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ ಚಿಕ್ಕಣ್ಣ, ಪ್ರೊ.ಬಿ.ಜಯಪ್ರಕಾಶಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.ಗೋಷ್ಠಿಯಲ್ಲಿ ಎಚ್.ಡಿ.ಸೋಮಶೇಖರ್ ಇದ್ದರು.
ಜು.೨೫ರಂದು ವಿಜ್ಞಾನ, ಜನಪದ ಕಲೆ, ಜನಪದ ಕಲಾವಿದ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ಸಂಘದಿಂದ ಜು.೨೫ರಂದು ಸಂಜೆ ೪ ಗಂಟೆಗೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ, ಸಿ.ನಾಗರಾಜು-ಗುಣಸಾಗರಿ ಸಿ.ನಾಗರಾಜು ಜನಪದ ಕಲಾ ಪ್ರಶಸ್ತಿ, ಚೆನ್ನಮ್ಮ ಕರಿಯಪ್ಪ ಜನಪದ ಕಲಾವಿದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.ಅಧ್ಯಕ್ಷತೆಯನ್ನು ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ವಹಿಸುವರು. ಉದ್ಯಮಿ ಜಿ.ಸಿ.ಪ್ರಸನ್ನಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಆಂಗ್ಲ ಉಪನ್ಯಾಸಕ ಎಸ್.ಸುದೀಪ್ಕುಮಾರ್, ಸಾಹಿತಿಗಳಾದ ಗುಣಶೀ ಸಿ.ನಾಗರಾಜು, ಪ್ರೊ.ನರಸಿಂಹೇಗೌಡ ಅವರು ಉಪಸ್ಥಿತರಿರುವರು.ಮಂಡ್ಯ ತಾಲೂಕು ಹೊನ್ನಾಯಕನಹಳ್ಳಿ ವಿಜ್ಞಾನ ಶಿಕ್ಷಕ ಎನ್.ಜಿ.ಅಶೋಕ್ರವರಿಗೆ ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ, ಚನ್ನರಾಯಪಟ್ಟಣದ ಜನಪದ ಕಲಾವಿದ ಉಮೇಶ್ ತೆಂಕನಹಳ್ಳಿ ಅವರಿಗೆ ಸಿ.ನಾಗರಾಜು ಜನಪದ ಕಲಾವಿದ ಪ್ರಶಸ್ತಿ, ಕೀಲಾರದ ತತ್ವಪದ ಕಲಾವಿದ ಸಿ.ಆರ್.ಸಂಜೀವಯ್ಯರಿಗೆ ಗುಣಸಾಗರಿ ಸಿ.ನಾಗರಾಜು ಜನಪದ ಕಲಾ ಪ್ರಶಸ್ತಿ ಹಾಗೂ ಬೇವಿನಹಳ್ಳಿ ತತ್ವಪದ ಕಲಾವಿದೆ ನಂಜಮ್ಮರವರಿಗೆ ಚನ್ನಮ್ಮ ಕರಿಯಪ್ಪ ಜನಪದ ಕಲಾವಿದೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.