ಕಾರ್ಯಾಚರಣೆಯಲ್ಲಿನ ಸುಧಾರಣೆ : ರಾಜ್ಯದ ಎರಡು ಗ್ರಾಮೀಣ ಬ್ಯಾಂಕ್‌ ಮೇ1ಕ್ಕೆ ವಿಲೀನ

| N/A | Published : Apr 09 2025, 12:33 AM IST / Updated: Apr 09 2025, 06:11 AM IST

ಕಾರ್ಯಾಚರಣೆಯಲ್ಲಿನ ಸುಧಾರಣೆ : ರಾಜ್ಯದ ಎರಡು ಗ್ರಾಮೀಣ ಬ್ಯಾಂಕ್‌ ಮೇ1ಕ್ಕೆ ವಿಲೀನ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಬ್ಯಾಂಕ್‌ಗಳ ಕಾರ್ಯಾಚರಣೆಯಲ್ಲಿನ ಸುಧಾರಣೆ ಉದ್ದೇಶದಿಂದ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ‘ಒಂದು ರಾಜ್ಯ ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ (ಆರ್‌ಆರ್‌ಬಿ)’ ಯೋಜನೆ ಮೇ 1ರಿಂದಲೇ ಅನುಷ್ಠಾನಕ್ಕೆ ಬರಲಿದೆ. ಅದರಂತೆ ಕರ್ನಾಟಕ 2 ಗ್ರಾಮೀಣ ಬ್ಯಾಂಕ್‌ಗಳು ಇನ್ನು ಒಂದಾಗಲಿವೆ.  

 ನವದೆಹಲಿ: ಗ್ರಾಮೀಣ ಬ್ಯಾಂಕ್‌ಗಳ ಕಾರ್ಯಾಚರಣೆಯಲ್ಲಿನ ಸುಧಾರಣೆ ಉದ್ದೇಶದಿಂದ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ‘ಒಂದು ರಾಜ್ಯ ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ (ಆರ್‌ಆರ್‌ಬಿ)’ ಯೋಜನೆ ಮೇ 1ರಿಂದಲೇ ಅನುಷ್ಠಾನಕ್ಕೆ ಬರಲಿದೆ. ಅದರಂತೆ ಕರ್ನಾಟಕ 2 ಗ್ರಾಮೀಣ ಬ್ಯಾಂಕ್‌ಗಳು ಇನ್ನು ಒಂದಾಗಲಿವೆ. ಒಟ್ಟಾರೆ ಕರ್ನಾಟಕ ಸೇರಿ 11 ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚಿರುವ 15 ಗ್ರಾಮೀಣ ಬ್ಯಾಂಕ್‌ಗಳು ವಿಲೀನಗೊಳ್ಳಲಿವೆ.

ಕರ್ನಾಟಕದಲ್ಲಿ ಇದೀಗ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಎಂಬ 2 ಆರ್‌ಆರ್‌ಬಿಗಳು ಕಾರ್ಯಾಚರಣೆ ನಡೆಸುತ್ತಿವೆ. ಮೇ ತಿಂಗಳ ಆರಂಭದಿಂದಲೇ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನೊಂದಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ವಿಲೀನಗೊಳ್ಳಲಿದೆ. ಕೆನರಾ ಬ್ಯಾಂಕ್‌ ಈ ಬ್ಯಾಂಕ್‌ನ ಪ್ರಾಯೋಜಕತ್ವ ಬ್ಯಾಂಕ್‌ ಆಗಿರಲಿದೆ.

ಈ ವಿಲೀನ ಪ್ರಕ್ರಿಯೆಯ ಬಳಿಕ ದೇಶದಲ್ಲಿ ಹಾಲಿ ಇರುವ 43 ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ ಮುಂದಿನ ತಿಂಗಳಿಂದ 28ಕ್ಕಿಳಿಯಲಿದೆ.

ಗ್ರಾಮೀಣ ಬ್ಯಾಂಕ್‌ಗಳಲ್ಲಿನ ಕಾರ್ಯಚಟುವಟಿಕೆಯಲ್ಲಿ ದಕ್ಷತೆ ಮತ್ತು ವೆಚ್ಚ ಕಡಿತದ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆಯೂ ಗ್ರಾಮೀಣ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಡೆದಿದ್ದು, ಇದು ನಾಲ್ಕನೇ ಹಂತದ ವಿಲೀನ ಪ್ರಕ್ರಿಯೆ ಆಗಿದೆ.