ಸಾರಾಂಶ
ಹಾನಗಲ್ಲ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವಕ್ಕೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು. ಬಳಿಕ ಗ್ರಾಮಸ್ಥರ ಕುಂದು-ಕೊರತೆಗಳನ್ನು ಆಲಿಸಿದರು.
ಹಾನಗಲ್ಲ: ಅಂಧಕಾರ ಹೋಗಲಾಡಿಸಿ ಜ್ಞಾನದ ಬೆಳಕು ಹೊತ್ತಿಸುವುದೇ ಕಾರ್ತಿಕೋತ್ಸವ. ದೀಪ ತಾನು ಉರಿದು ಜಗಕೆ ಬೆಳಕು ನೀಡುತ್ತದೆ. ಅದೇ ರೀತಿ ಮನುಷ್ಯ ಕಷ್ಟಗಳನ್ನೆಲ್ಲ ಎದುರಿಸಿ ಸಮಾಜದಲ್ಲಿ ಮುಂದೆ ಬರಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಯತ್ತಿನಹಳ್ಳಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದಿನ ಕಳೆದಂತೆ ಸಮುದಾಯದಲ್ಲಿ ಧಾರ್ಮಿಕ ಮನೋಭಾವನೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧೆ, ಭಕ್ತಿಯಿಂದ ಭಾಗವಹಿಸುತ್ತಿರುವುದನ್ನು ಕಾಣಬಹುದಾಗಿದೆ. ಹಾಗಾಗಿಯೇ ಹಳ್ಳಿಗಳಲ್ಲಿ ಪರಸ್ಪರ ಬಾಂಧವ್ಯ, ಪ್ರೀತಿ, ವಿಶ್ವಾಸ ಇನ್ನೂ ಇದೆ ಎಂದು ಹೇಳಿದ ಅವರು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಜನತೆಗೆ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಸರ್ಕಾರ ನೆರವಿಗೆ ಧಾವಿಸಿದೆ. ಗ್ಯಾರಂಟಿ ಯೋಜನೆಗಳಿಗೆ ಹಾನಗಲ್ ತಾಲೂಕಿಗೆ ವಾರ್ಷಿಕ ₹300 ಕೋಟಿ ಆರ್ಥಿಕ ನೆರವು ಸಿಗುತ್ತಿದೆ ಎಂದರು.ಬಳಿಕ ಗ್ರಾಮಸ್ಥರ ಕುಂದು-ಕೊರತೆಗಳನ್ನು ಸಹ ಆಲಿಸಿದ ಶಾಸಕ ಮಾನೆ, ಸೂಕ್ತ ಪರಿಹಾರ ದೊರಕಿಸಿದರು. ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಸುರೇಶ ಡೊಮ್ಮನಾಳ, ಮಂಜು ತಳವಾರ, ಉಮೇಶ ತಳವಾರ, ಶಿವು ತಳವಾರ, ಗಣೇಶ ಯತ್ತಿನಹಳ್ಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.