ಕನ್ನಡಪ್ರಭ ವಾರ್ತೆ ಚಿಂತಾಮಣಿ
ಕನ್ನಡ ಭಾಷೆ ಕೇವಲ ಒಂದು ಭಾಷೆ ಅಲ್ಲ, ಅದು ನಮ್ಮ ಆತ್ಮ, ನಮ್ಮ ಗುರುತು. ನಮ್ಮ ಪೂರ್ವಜರು ಬೆಳೆಸಿದ ಈ ಸಮೃದ್ಧ ಸಾಹಿತ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವುದು ನಮ್ಮ ಕರ್ತವ್ಯ. ಈ ದಾರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎನ್.ವಿ. ಶ್ರೀನಿವಾಸನ್ ಅಭಿಪ್ರಾಯಪಟ್ಟರು.ನಗರದ ಟ್ಯಾಂಕ್ ಬಂಡ್ ರಸ್ತೆಯ ಸಾಯಿಬಾಬಾ ಮಂದಿರದಲ್ಲಿ ನಡೆದ ಜಿ ಭಾಗೀರಥಿ ದತ್ತಿ ನಿಧಿ ಕಾರ್ಯಕ್ರಮದಲ್ಲಿ ನಡೆದ ಕನ್ನಡ ಗೀತೆಗಳ ಗಾಯನ ಮತ್ತು ಕವಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಅನೇಕ ವರ್ಷಗಳಿಂದ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ ಈ ಮಹತ್ತರ ಕಾರ್ಯಗಳು ನಿರಂತರವಾಗಿ ಸಾಗಲು ಆರ್ಥಿಕ ಬೆಂಬಲ ಅತ್ಯಗತ್ಯ ನಮ್ಮ ಒಂದು ಸಣ್ಣ ಸಹಾಯವು ದೊಡ್ಡ ಬದಲಾವಣೆಗೆ ಕಾರಣವಾಗಬಹುದು, ಒಂದು ಸಾಹಿತ್ಯ ಕಾರ್ಯಕ್ರಮ ಯಶಸ್ವಿಯಾಗಲು, ಪುಸ್ತಕ ಹೊರತರಲು, ಒಬ್ಬ ಕವಿಗೆ ವೇದಿಕೆ ಕಲ್ಪಿಸಲು ನಮ್ಮ ದಾನವೇ ಸಹಾಯಕವಾಗುತ್ತದೆ, ಈ ನಿಟ್ಟಿನಲ್ಲಿ ದತ್ತಿ ದಾನಗಳನ್ನು ಕೊಡುಗೆಯಾಗಿ ನೀಡಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಎಸ್.ಅಶ್ವಥ್ ಮಾತನಾಡಿ, ಇಂದಿನ ತಂತ್ರಜ್ಞಾನ ಮತ್ತು ಜಾಗತೀಕರಣದ ಪರಿಣಾಮವಾಗಿ ನಮ್ಮ ಭಾಷೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಪರಭಾಷೆಗಳ ಪ್ರಭಾವ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ, ಕನ್ನಡ ಸಾಹಿತ್ಯ ಪರಿಷತ್ತು ಚರ್ಚೆ, ಸಂವಹನ, ವಿಚಾರಗೋಷ್ಠಿ, ವಚನಗಳು ಮುಂತಾದ ವಿಚಾರಗಳ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಲ್ಪ ಶಾಲೆಯ ಸಂಸ್ಥಾಪನಾ ಅಧ್ಯಕ್ಷ ಕೆ.ಆರ್. ನರಸಿಂಹಪ್ಪ ಮಾತನಾಡಿ, ಕನ್ನಡ ಉಳಿದರೆ ನಾವು ಉಳಿಯುತ್ತೇವೆ. ನಮ್ಮ ಪೂರ್ವಜರು ನಮಗೆ ನೀಡಿದ ಈ ಅಮೂಲ್ಯ ಭಾಷಾ ಸಂಪತ್ತನ್ನು ನಾವು ಕಾಪಾಡಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ತಲುಪುವುದಿಲ್ಲ. ಆದ್ದರಿಂದ ಕನ್ನಡ ಸೇವೆಗೆ ಎಲ್ಲರೂ ಸಿದ್ದರಾಗಬೇಕು. ಈ ಮಹತ್ವದ ಕಾರ್ಯಕ್ರಮ ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತಿಗೂ ಸಹಭಾಗಿಗಳಿಗೂ ಅಭಿನಂದನೆಗಳು ಎಂದರು.
ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಭಾಗಿರಥಿ, ಕೆ.ಆರ್.ನರಸಿಂಹಪ್ಪ ಮತ್ತು ಎನ್.ವಿ.ಶ್ರೀನಿವಾಸನ್ರನ್ನು ಶಾಲು, ಹಾರ ಮತ್ತು ಪುಸ್ತಕವನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಾಗರಾಣಿ, ವಿಶ್ವನಾಥ್ ಬಿ, ಸರಸ್ವತಮ್ಮ ಈ ವೈ, ಸುರೇಶ್ ಎಸ್ ಎಫ್ ಎಸ್, ನಂಜುಂಡಗೌಡ, ಶಿವರಾಂ ಸರ್, ಜಗನ್ನಾಥ್, ರೆಡ್ಡಿ ರಮೇಶ್, ವೆಂಕಟರಮಣಪ್ಪ ,ಎಂವಿ ರಮೇಶ್, ಮುನಿರಾಜು, ಕುಮಾರಿ ಹಾರಿಕ, ಕುಮಾರಿ ಸ್ನೇಹ, ಗೀತ ಮತ್ತು ಲಕ್ಷ್ಮೀ ಗುರು ಪ್ರಸನ್ನ, ರಾಜಶೇಖರ ಯಾಗಂಟಿ, ಎನ್.ಬೇಟರಾಯಪ್ಪ, ಈಶ್ವರ ಸಿಂಗ್, ಕೆ.ಬಾಲಾಜಿ, ಕೆ.ಎಸ್.ನೂರುಲ್ಲಾ, ಅಕ್ಷಯ, ಶಿ.ಮಾ.ಮಂಜುನಾಥ, ಈಶ್ವರ ಸಿಂಗ್, ಕೆ.ಎಂ.ವೆಂಕಟೇಶ, ಕಸಾಪ ಮಾಜಿ ಅಧ್ಯಕ್ಷರಾದ ಮುನಿಕೃಷ್ಣಪ್ಪ, ಕೆ.ಎನ್ ರಮಣಾರೆಡ್ಡಿ, ಪದ್ಮಮ್ಮ, ಸೀತಮ್ಮ, ರೂಪಕಲಾ, ಆರ್ ನಾಗರಾಜು, ರಂಗನಾಥ ಎಸ್ ಎನ್, ವೆಂಕಟೇಶ್ ಕೆ ಎಂ, ರಾಜಮ್ಮ ಇದ್ದರು.