ಕಸ್ತೂರಿ ರಂಗನ್ ವರದಿ ಅನುಷ್ಠಾನ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ೭ನೇ ಕರಡು ಅಧಿಸೂಚನೆಗೆ ಜಿಲ್ಲೆಯ ೧೦೨ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಗ್ರಾಮಸಭೆಯ ಮೂಲಕ ತಕರಾರು ಸಲ್ಲಿಸಬೇಕು ಎಂದು ರೈತ ಹೋರಾಟ ಸಮಿತಿ ಮನವಿ ಮಾಡಿದೆ.

ಸೋಮವಾರಪೇಟೆ: ಕಸ್ತೂರಿ ರಂಗನ್ ವರದಿ ಅನುಷ್ಠಾನ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ೭ನೇ ಕರಡು ಅಧಿಸೂಚನೆಗೆ ಜಿಲ್ಲೆಯ ೧೦೨ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಗ್ರಾಮಸಭೆಯ ಮೂಲಕ ತಕರಾರು ಸಲ್ಲಿಸಬೇಕು ಎಂದು ರೈತ ಹೋರಾಟ ಸಮಿತಿ ಮನವಿ ಮಾಡಿದೆ.ಕರಡು ಅಧಿಸೂಚನೆಗೆ ತಕರಾರು ಸಲ್ಲಿಸಲು ಸೆ.೨೭ ಕೊನೆ ದಿನಾಂಕವಾಗಿದ್ದು, ಅದರೊಳಗೆ ೧೦೨ ಗ್ರಾಮ ಪಂಚಾಯಿತಿ ಪಿಡಿಒಗಳು ಗ್ರಾಮಸಭೆಯನ್ನು ಕರೆದು, ನೊಡೆಲ್ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರು ಸರ್ಕಾರಕ್ಕೆ ತಕರಾರು ಸಲ್ಲಿಸಬೇಕಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಯಾವುದೇ ಕಾರಣಕ್ಕೂ ಗ್ರಾಮಸಭೆ ಕರೆಯಲು ವಿಳಂಬ ಮಾಡಬಾರದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಒತ್ತಾಯಿಸಿದರು.ಜಿಲ್ಲೆಯ ೨೯೨ ಗ್ರಾಮಗಳಿಂದಲೂ ತಕರಾರು ಸಲ್ಲಿಕೆಯಾಗಬೇಕು. ಸ್ವಯಂ ಪ್ರೇರಿತರಾಗಿ ಪ್ರತಿಯೊಬ್ಬ ರೈತರು, ನಿವಾಸಿಗಳು ಗ್ರಾಮಸಭೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಕಸ್ತೂರಿ ರಂಗನ್ ವರದಿ ಅನುಷ್ಠಾನ, ಸೆಕ್ಷನ್-೪, ಸಿ ಆ್ಯಂಡ್ ಡಿ ಸಮಸ್ಯೆ ಜಿಲ್ಲೆಯ ರೈತರ ಮೇಲಿನ ತೂಗುಗತ್ತಿಯಾಗಿದೆ. ಕೊಡಗಿನ ನಿವಾಸಿಗಳ ನಿರಂತರ ಹೋರಾಟದಿಂದ ಮಾತ್ರ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಹೇಳಿದರು. ಕಸ್ತೂರಿ ರಂಗನ್ ವರದಿ ಅನುಷ್ಠಾನದ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಸೆ.೨೧,೨೨,೨೩ರಂದು ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನದಲ್ಲೇ ಸೆಕ್ಷನ್-೪ ಮತ್ತು ಸಿ ಆ್ಯಂಡ್ ಡಿ ಸಮಸ್ಯೆ ಪರಿಹರಿಸಲು ಚರ್ಚೆ ಮಾಡಬೇಕಿದೆ. ಜಿಲ್ಲೆಯ ಇಬ್ಬರು ಶಾಸಕರು ಜಿಲ್ಲೆಯ ರೈತರ ಪರವಾಗಿ ಚರ್ಚೆ ಮಾಡಬೇಕು ಎಂದು ಮನವಿ ಮಾಡಿದರು.ಸಮಿತಿಯ ಕಾನೂನು ಸಲಹೆಗಾರ ಬಿ.ಜೆ.ದೀಪಕ್ ಮಾತನಾಡಿ, ರಾಜ್ಯ ಸರ್ಕಾರ ಕಳೆದ ಸಾಲಿನಲ್ಲಿ ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಿತ್ತು. ಆದರೂ ಈ ವರ್ಷ ಕೇಂದ್ರ ಸರ್ಕಾರ ೭ನೇ ಕರಡು ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರ ತಿರಸ್ಕಾರ ಮಾಡಿದರೂ ೮ನೇ ಕರಡು ಸೂಚನೆ ಹೊರಡಿಸುವ ಸಾಧ್ಯತೆಗಳು ಹೆಚ್ಚಿರುವುದರಿಂದ, ಕಸ್ತೂರಿ ರಂಗನ್ ವರದಿಗೆ ರೈತಪರ ಕೆಲವು ಮಾರ್ಪಡುಗಳನ್ನು ಮಾಡಿ ಕಳುಹಿಸಬೇಕು. ಹೆಚ್ಚುವರಿ ಬಫರ್ ಪ್ರದೇಶವನ್ನು ನಿಗದಿಪಡಿಸಿದಂತೆ ಮಾರ್ಪಾಡು ಮಾಡಿದರೂ ಸಾಕಾಗುತ್ತದೆ ಎಂದು ಹೇಳಿದರು.ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ದಿವಾಕರ್ ಕೂತಿ ಪದಾಧಿಕಾರಿಗಳಾದ ದೇಶರಾಜ್, ಸಂಭ್ರಮ್ ಇದ್ದರು.