ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪು
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಇಲ್ಲಿನ ಪೆರ್ನಾಲ್ನಲ್ಲಿರುವ ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ಕಾಪು ತಾಲೂಕು ಮಟ್ಟದ ಸಮುದಾಯದ ಯುವಜನತೆಗೆ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಮೂಲಭೂತ ದಾಖಲಾತಿಗಳಿಗೆ ಸಂಬಂಧಿಸಿದ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.ತರಬೇತಿಯನ್ನು ಕಾಪು ತಾಲೂಕು ತಹಸೀಲ್ದಾರ್ ಡಾ. ಪ್ರತಿಭಾ ಆರ್. ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ, ಭಾರತದ ಪ್ರಜೆಗಳಾಗಿ ಪ್ರತಿಯೊಬ್ಬರೂ ಮೂಲಭೂತ ದಾಖಲಾತಿಗಳನ್ನು ಹೊಂದುವುದು ಅತ್ಯವಶ್ಯಕ. ಸರ್ಕಾರ ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕಾಗಿ ಬೇರೆಬೇರೆ ಇಲಾಖೆಗಳ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಪಡೆಯಲು ಅನೇಕ ದಾಖಲೆಗಳನ್ನು ಅವಶ್ಯಕವಾಗಿವೆ. ಇವೆಲ್ಲವನ್ನು ಪಡೆಯಲು ಶಿಕ್ಷಣ ಹಾಗೂ ತರಬೇತಿಗಳು ಮುಖ್ಯ ಎಂದರು.ಗ್ರಾಮ ಸಹಾಯಕರಾದ ಶ್ರೀನಿವಾಸ್ ಇವರು ಕಂದಾಯ ಇಲಾಖೆಯಲ್ಲಿ ಸಿಗುವಂತಹ ಯೋಜನೆಗಳು ವಿವಿಧ ಪಿಂಚಣಿಗಳು ಹಾಗೂ ಭೂಮಿಯ ಖಾತಾ ಬದಲಾವಣೆ ದಾಖಲಾತಿಗಳು ಇದಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸುವ ವಿಧಾನಗಳು ಸಲ್ಲಿಸಬೇಕಾಗಿರುವ ದಾಖಲೆಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.ವೇದಿಕೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನಯ ಅಡ್ವೆ ಮತ್ತು ಕಾಪು ಸಂಘದ ಅಧ್ಯಕ್ಷರಾದ ಶೇಖರ ಕಾಪು ಉಪಸ್ಥಿತರಿದ್ದರು. ಐವತ್ತಕ್ಕೂ ಅಧಿಕ ಮಂದಿ ಸಮುದಾಯ ಬಾಂಧವರು ಭಾಗವಹಿಸಿದ್ದರು. ಒಕ್ಕೂಟದ ಸಂಯೋಜಕ ಪುತ್ರನ್ ಹೆಬ್ರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನರಸಿಂಹ ಪೆರ್ಡೂರು ಧನ್ಯವಾದಗೈದರು.