ಕಾಯಕ ಸತ್ಯ, ಶುದ್ಧವಾಗಿರಲಿ

| Published : Aug 26 2024, 01:40 AM IST

ಸಾರಾಂಶ

ವಿದ್ಯಾರ್ಥಿಗಳಾದ ನೀವು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯವಾಗುತ್ತದೆ. ನಿಮ್ಮಲ್ಲಿ ಒಳ್ಳೆ ಚಿಂತನೆ ಒಳ್ಳೆ ಛಲವಿರಬೇಕು

ಗದಗ: ವಿದ್ಯಾರ್ಥಿಗಳು ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಶರಣರ ವಚನಗಳು ಅಮೃತವಿದ್ದಂತೆ ಮತ್ತು ಬದುಕಿಗೆ ದಾರಿ ದೀಪದಂತೆ ವಿದ್ಯಾರ್ಥಿಗಳು ಜೀವನದಲ್ಲಿ ನಯ-ವಿನಯದಿಂದ ನಡೆದುಕೊಳ್ಳಬೇಕು ಎಂದು ಗದಗ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಸಿದ್ಧಲಿಂಗೇಶ ಸಜ್ಜನಶೆಟ್ಟರ್‌ ಹೇಳಿದರು.

ಅವರು ನಗರದ ತೋಂಟದ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶ್ರಾವಣ ಮಾಸದ ಪ್ರಯಕ್ತ ತಾಲೂಕು ಕದಳಿ ಮಹಿಳಾ ವೇದಿಕೆಯಿಂದ ಏರ್ಪಡಿಸಲಾದ ಬಸವಾದಿ ಶರಣರ ವಚನಗಳ ಜ್ಞಾನಾಮೃತ ವಿಷಯ ಕುರಿತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಉಪನ್ಯಾಸ ನೀಡಿದರು.

ನೂರಕ್ಕೆ ನೂರು ನಾವು ಶರಣರೇ ಆಗುವುದಕ್ಕೆ ಆಗುವುದಿಲ್ಲ, ನಾವು ಎಷ್ಟು ಸಾಧ್ಯವೋ ಅಷ್ಟು ಶರಣ ಮಾರ್ಗದಲ್ಲಿ ನಡೆಯಬೇಕು.ಕಾಯಕದೊಳಗೆ ನಿರತರಾಗಬೇಕು, ಅಂದರೆ ನಾವು ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಕಾಯಕವು ಹೇಗಿರಬೇಕೆಂದರೆ ಸತ್ಯವಾಗಿಯೂ, ಶುದ್ಧವಾಗಿಯೂ ಇರಬೇಕು.

ವಿದ್ಯಾರ್ಥಿಗಳಾದ ನೀವು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯವಾಗುತ್ತದೆ. ನಿಮ್ಮಲ್ಲಿ ಒಳ್ಳೆ ಚಿಂತನೆ ಒಳ್ಳೆ ಛಲವಿರಬೇಕು ಎಂದರು.

ಉದ್ಘಾಟಕರಾಗಿ ಆಗಮಿಸಿದ ತಾಲೂಕು ಕದಳಿ ಮಹಿಳ ವೇದಿಕೆ ಗೌರವಾಧ್ಯಕ್ಷೆ ರತ್ನಕ್ಕ ಪಾಟೀಲ ಮುಂತಾದವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ತೋಂಟದ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸುರೇಶ ಭಜಂತ್ರಿ ಮುಂತಾದವರು ಮಾತನಾಡಿದರು. ನಯನಾ ಅಳವಂಡಿ ಪ್ರಾರ್ಥಿಸಿದರು. ಮಂಜುಳಾ ಅಕ್ಕಿ ನಿರೂಪಿಸಿದರು. ಕಲಾವತಿ ಸಂಕನಗೌಡರ ವಂದಿಸಿದರು.

ತಾಲೂಕು ಕದಳಿ ಮಹಿಳಾ ವೇದಿಕೆಯ ಉಪಾಧ್ಯಕ್ಷ ರೇಣುಕಾ ಕರೇಗೌಡ್ರ, ಬಸವದಳದ ಅಧ್ಯಕ್ಷ ವಿ.ಕೆ. ಕರೇಗೌಡ್ರ, ಪ್ರಾಧ್ಯಾಪಕ ಡಾ.ಎಂ.ವಿ. ಐಹೊಳ್ಳಿ, ಪ್ರೇಮಾ ಮೇಟಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.