ಸಾರಾಂಶ
ಬಂಟ್ವಾಳ: ಸಿಡಿಲು ಬಡಿದು ಬಾಲಕ ಮೃತಪಟ್ಟ ಘಟನೆ ಭಾನುವಾರ ಸಂಜೆ ಕೆದಿಲ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಮುರಿಯಾಜೆ ನಿವಾಸಿ ಚಂದ್ರಹಾಸ ಎಂಬವರ ಪುತ್ರ, ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ ವಿದ್ಯಾರ್ಥಿ ಸುಭೋದ್ (14) ಮೃತ ಬಾಲಕ.ಭಾನುವಾರ ಸಂಜೆ 5.30ರ ಸುಮಾರಿಗೆ ಮನೆಯ ಸಿಟೌಟ್ನಲ್ಲಿ ಕುಳಿತ್ತಿದ್ದ ವೇಳೆ ಸಿಡಿಲುಬಡಿದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಸುಭೋದ್ನನ್ನು ತಕ್ಷಣ ಮನೆಯವರು ಮಾಣಿಯ ಆಸ್ಪತ್ರೆಯೊಂದಕ್ಕೆ ಕರೆತಂದರು. ಅಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸುಭೋದ್ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ 8 ತರಗತಿ ವಿದ್ಯಾರ್ಥಿ. ಮುಂದಿನ ಪರಿಹಾರ ಕ್ರಮಕ್ಕೆ ತಹಸೀಲ್ದಾರ್ ಅರ್ಚನಾ ಭಟ್ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ವಿಟ್ಲ ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ, ಗ್ರಾಮ ಆಡಳಿತಾಧಿಕಾರಿ ಅನಿಲ್ ಕುಮಾರ್, ಕೆದಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ವಾಲ್ತಾಜೆ, ಸದಸ್ಯರಾದ ಉಮೇಶ್ ಮುರುವ, ಹಝೀಝ್ ಅವರು ಆಸ್ಪತ್ರೆಗೆ ಭೇಟಿ ನೀಡಿದರು.--------
ಗುಡುಗು ಸಹಿತ ಮಳೆ: ಮರ ಬಿದ್ದು ಮನೆಗೆ ಹಾನಿಮಂಗಳೂರು/ಪುತ್ತೂರುದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಮಳೆ ಭಾನುವಾರ ಸಂಜೆ ದಿಢೀರನೆ ಸುರಿದಿದೆ. ಪುತ್ತೂರು ತಾಲೂಕಿನಲ್ಲಿ ಮರ ಬಿದ್ದು ಮನೆಗೆ ಹಾನಿಯಾಗಿದೆ.ಮಂಗಳೂರು ನಗರ ಸೇರಿದಂತೆ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ವಿಟ್ಲ ಭಾಗಗಳಲ್ಲಿ ಕೆಲಕಾಲ ಉತ್ತಮ ಮಳೆ ಸುರಿದಿದೆ. ಗುಡುಗು- ಮಿಂಚು ಸಹಿತ ಚಳಿಗಾಳಿಯೊಂದಿಗೆ ಮಳೆಯಾಗಿದೆ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಹಗಲಿಡೀ ಬಿಸಿಲು, ಸಂಜೆ ಬಳಿಕ ಮಳೆಯಾಗುತ್ತಿದೆ. ಈಗ ದಿಢೀರನೆ ಮಳೆ ಸುರಿಯುತ್ತಿರುವುದು ಅಡಕೆ, ಬತ್ತ, ತರಕಾರಿ ಬೆಳೆಗೂ ಕೊಂಚ ಹಿನ್ನಡೆಯಾಗಿದೆ.ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರದ ಗೆಲ್ಲು ಮುರಿದು ಬಿದ್ದು ಮನೆಗೆ ಹಾನಿಯಾದ ಘಟನೆ ಭಾನುವಾರ ಸಂಜೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಅರಿಕ್ಕಿಲ ಚೆಡವು ಎಂಬಲ್ಲಿ ನಡೆದಿದೆ. ಚೆಡವು ನಿವಾಸಿ ಹಮೀದ್ ಮೇಸ್ತ್ರಿ ಎಂಬವರ ಮನೆಗೆ ಮರದ ಗೆಲ್ಲು ಮುರಿದು ಬಿದ್ದಿದ್ದು ಅದೃಷ್ಟವಶಾತ್ ಮನೆ ಮಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳೀಯರು ಯುವಕರು ಸೇರಿ ಮರವನ್ನು ತೆರವು ಮಾಡಿದ್ದಾರೆ. ಘಟನೆಯಿಂದ ಭಾಗಶಃ ನಷ್ಟ ಸಂಭವಿಸಿದೆ.