ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆ ಮೇಲೆ ಹದ್ದಿನ ಕಣ್ಣಿಡಿ

| Published : Sep 04 2025, 01:00 AM IST

ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆ ಮೇಲೆ ಹದ್ದಿನ ಕಣ್ಣಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಮುಖ ಗಣೇಶ ಮೂರ್ತಿಗಳು ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆಗಳ ಹಿನ್ನೆಲೆಯಲ್ಲಿ, ಬಂದೋಬಸ್ತ್ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಆಗಮಿಸಿರುವ ಪೊಲೀಸ್ ಅಧಿಕಾರಿಗಳು, ಅತ್ಯಂತ ಜವಾಬ್ದಾರಿಯಿಂದ ಬಂದೋಬಸ್ತ್ ಕರ್ತವ್ಯ ನಿರ್ವಹಣೆ ಮಾಡಬೇಕು ಎಂದು ರಾಜ್ಯ ಪೊಲೀಸ್ ಇಲಾಖೆ ಕಾನೂನು -ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌.ಹಿತೇಂದ್ರ ಸೂಚಿಸಿದರು.

ಶಿವಮೊಗ್ಗ: ಪ್ರಮುಖ ಗಣೇಶ ಮೂರ್ತಿಗಳು ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆಗಳ ಹಿನ್ನೆಲೆಯಲ್ಲಿ, ಬಂದೋಬಸ್ತ್ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಆಗಮಿಸಿರುವ ಪೊಲೀಸ್ ಅಧಿಕಾರಿಗಳು, ಅತ್ಯಂತ ಜವಾಬ್ದಾರಿಯಿಂದ ಬಂದೋಬಸ್ತ್ ಕರ್ತವ್ಯ ನಿರ್ವಹಣೆ ಮಾಡಬೇಕು ಎಂದು ರಾಜ್ಯ ಪೊಲೀಸ್ ಇಲಾಖೆ ಕಾನೂನು -ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌.ಹಿತೇಂದ್ರ ಸೂಚಿಸಿದರು.

ಶಿವಮೊಗ್ಗದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ವಿಮರ್ಶನಾ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ 5 ದಿನಗಳ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಗಳು ಮುಕ್ತಾಯವಾಗಿವೆ. ಮುಂದಿನ ದಿನಗಳಂದು ಮುಖ್ಯವಾಗಿ ಭದ್ರಾವತಿ, ಶಿವಮೊಗ್ಗ, ರಿಪ್ಪನ್‌ಪೇಟೆ, ಸಾಗರದ ಹಿಂದೂ ಮಹಾಸಭಾ ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆಗಳು ನಡೆಯಲಿವೆ. ಬಂದೋಬಸ್ತ್ ಕರ್ತವ್ಯವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಎಂದು ಸೂಚಿಸಿದರು.ಹಾಗೆಯೇ ಶಿವಮೊಗ್ಗ ಜಿಲ್ಲೆಯ (ಸ್ಥಳೀಯ) ಅಧಿಕಾರಿಗಳು ಕೂಡ, ಬಂದೋಬಸ್ತ್ ಕರ್ತವ್ಯವನ್ನು ಜಾಗರೂಕತೆಯಿಂದ ನಿರ್ವಹಿಸಬೇಕು. ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು, ತಮಗೆ ನೇಮಕವಾದ ಸೆಕ್ಟರ್‌ನಲ್ಲಿಯೇ ಕಾರ್ಯನಿರ್ವಹಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ತಾಕೀತು ಮಾಡಿದರು.ಸಾಕಷ್ಟು ಮುಂಜಾಗ್ರತಾ ಕ್ರಮಗಳ ಪಾಲನೆ ಮಾಡಬೇಕು. ಮೆರವಣಿಗೆಗಳ ವೇಳೆ ಬೈಲೈನ್ ಪೆಟ್ರೋಲಿಂಗ್ ಕರ್ತವ್ಯವನ್ನು ಹೆಚ್ಚಾಗಿ ನಿರ್ವಹಿಸಬೇಕು. ಘೋಷಣೆಗಳನ್ನು ಕೂಗುವವರ ಮೇಲೆ ಅತ್ಯಂತ ಹೆಚ್ಚಿನ ನಿಗಾವಹಿಸಬೇಕು ಎಂದರು.

ಮೆರವಣಿಗೆ ಹಾದು ಹೋಗುವ ಪ್ರಮುಖ ಸ್ಥಳಗಳಲ್ಲಿ ಡ್ರೋನ್ ಕ್ಯಾಮೆರಾ ಬಳಸಿಕೊಳ್ಳಬೇಕು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಮೆರವಣಿಗೆಗಳಲ್ಲಿ 75 ಡೆಸಿಬಲ್‌ಗಿಂತ ಹೆಚ್ಚಿಗೆ ಶಬ್ದವನ್ನುಂಟು ಮಾಡುವವರ ವಿರುದ್ಧ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಪೂರ್ವ ವಲಯ ಐಜಿಪಿ ಡಾ.ರವಿಕಾಂತೇ ಗೌಡ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಬಿಎಂಟಿ ಎಫ್ ಪೊಲೀಸ್ ಅಧೀಕ್ಷರಾದ ಮುತ್ತುರಾಜ್, ಹುಬ್ಬಳ್ಳಿಯ ಐಎಸ್‌ಡಿ ವಿಭಾಗದ ರಾಜೀವ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ.ಎ.ಜಿ, ಎಸ್.ರಮೇಶ್‌ಕುಮಾರ್ ಮತ್ತಿತರರಿದ್ದರು.