ಕುಕನೂರು: ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ, ಯಾವುದೇ ಕಾರಣಕ್ಕೂ ದುಶ್ಚಟಗಳ ದಾಸರನ್ನಾಗಿ ಮಾಡದೇ ಒಳ್ಳೆಯ ಶಿಕ್ಷಣ ನೀಡಿ ಸುಸಂಸ್ಕೃತರನ್ನಾಗಿ ಮಾಡಬೇಕು ಎಂದು ಕುಕನೂರ ಪೊಲೀಸ್‌ ಠಾಣೆಯ ನೂತನ ಪಿಎಸ್‌ಐ ಎಸ್. ಪಿ. ನಾಯಕ ಹೇಳಿದರು.

ತಾಲೂಕಿನ ಕಕ್ಕಿಹಳ್ಳಿ ತಾಂಡಾದಲ್ಲಿ ಗ್ರಾಮಸ್ಥರೊಡನೆ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಅಂಕದ ಹಿಂದೆ ಬೀಳದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಯುವ ವೃಂದ ಪ್ರಯತ್ನಿಸಬೇಕು. ಪಾಲಕರು ಮಕ್ಕಳನ್ನು ಹುರಿದುಂಬಿಸಿ ಒಳ್ಳೆಯ ನಾಗರಿಕರನ್ನಾಗಿ ರೂಪಿಸಬೇಕು. ಅಂದಾಗ ಮಾತ್ರ ನಿಮ್ಮ ಶೈಕ್ಷಣಿಕ ಕನಸು ಸಾಕಾರಗೊಳ್ಳುತ್ತದೆ ಎಂದರು.

ಮಟ್ಕಾ, ಇಸ್ಪೀಟ್, ಆನ್‌ಲೈನ್ ಬೆಟ್ಟಿಂಗ್, ಇಂಥ ಸಮಾಜ ಘಾತುಕ ಚಟುವಟಿಕೆ ನಡೆದರೆ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಮಾತನಾಡಿ, ಕುಕನೂರ ಠಾಣೆಯ ಇತಿಹಾಸದಲ್ಲಿ ನಮ್ಮ ಬಂಜಾರ ಸಮುದಾಯದ ಪೊಲೀಸ್‌ ಅಧಿಕಾರಿ ಬಂದಿದ್ದು ಇದೇ ಮೊದಲ ಬಾರಿ. ಹೀಗಾಗಿ ನಾವೆಲ್ಲ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ನಮ್ಮ ಮಕ್ಕಳು ಅವರ ತರಹ ಉನ್ನತ ಮಟ್ಟದಲ್ಲಿ ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಪತ್ರಕರ್ತ ಚಂದ್ರು ಭಾನಾಪುರ ಸ್ವಾಗತಿಸಿದರು. ಯಮನೂರಪ್ಪ ಕಟ್ಟಿಮನಿ ಮಾತನಾಡಿದರು. ತಾಂಡಾದ ನಾಯಕರಾದ ಬಸವಂತಪ್ಪ ನಾಯಕ, ಮೇಘರಾಜ ಬಳಿಗೇರಿ, ಹಂಪಣ್ಣ ಕಟ್ಟಿಮನಿ, ಪರಸಪ್ಪ ಕಾರಭಾರಿ, ಯಲ್ಲಪ್ಪ ಕಾರಭಾರಿ, ವಿಶ್ವನಾಥ ರತನ್, ಕೃಷ್ಣಪ್ಪ ಬಳಗೇರಿ, ಪ್ರಭು ಕಟ್ಟಿಮನಿ, ಶೀನಪ್ಪ ಇಟಗಿ, ಶರಣಪ್ಪ ಚಿಕೇನಕೊಪ್ಪ, ಚನ್ನಪ್ಪ ಹೊನ್ನುಂಚಿ, ವಾಲಪ್ಪ ತಲ್ಲೂರು, ರಾಘವೇಂದ್ರ ಬಳಗೇರಿ, ನಾಗರಾಜ ಭಾನಾಪುರ, ಚೇತನ ಬಳಗೇರಿ, ಮಹೇಶ ಕಾರಭಾರಿ, ಹನುಮಂತ ಚವ್ಹಾಣ, ಕುಮಾರ ಬಳಗೇರಿ, ಶಿವು ಮಾರನಾಳ, ಸೋಮಪ್ಪ ಕಾರಭಾರಿ, ರತ್ನಪ್ಪ ಹೊನ್ನುಂಚಿ, ಸೋಮಪ್ಪ ಚಿಕೆನಕೊಪ್ಪ, ವೆಂಕಟೇಶ ರಾಟಿಮನಿ, ತಿರುಪತಿ ಕಾರಭಾರಿ, ಶಶಿಕುಮಾರ ಕಾರಭಾರಿ, ವಿಜಯ ಚವ್ಹಾಣ, ಪರಸಪ್ಪ ಹುಲಗಿ, ಪೊಲೀಸ್‌ ಸಿಬ್ಬಂದಿ ಮಂಜುನಾಥ ಮ್ಯಾಳಿ, ಶರಣಪ್ಪ ಇತರರಿದ್ದರು.